ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸುಮಲತಾ ಬಿಜೆಪಿ ಸೇರಿದ್ದು ಅವರನ್ನು ಬೆಂಬಲಿಸಬೇಕು. ಸದ್ಯ ಅವರು ಮೌನವಾಗಿದ್ದಾರೆ. ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಆರಂಭಿಸಿದ್ದಾರೆ.
ನಾನು ಪಕ್ಷಕ್ಕಾಗಿ ಅಲ್ಲ, ವ್ಯಕ್ತಿಗಾಗಿ ಬರುತ್ತೇನೆ. ಐದು ವರ್ಷಗಳ ಹಿಂದೆ ನರೇಂದ್ರಣ್ಣ ಸಹಾಯ ನನಗೆ ನೆನಪಿದೆ ಎಂದು ದರ್ಶನ್ ಮಾತು ಆರಂಭಿಸಿದರು. ಮಾಧ್ಯಮದವರು ಏನೇನೋ ಹಾಕಿದ್ರೆ ತುಂಬಾ ಕಷ್ಟ ಆಗುತ್ತದೆ. ಹೀಗಾಗಿ ನಾನು ಸ್ಪಷ್ಟನೆ ಕೊಡುತ್ತೇನೆ. ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರ ಸಿಗದಿದ್ದರೆ ನಮ್ಮ ಪರ ಪ್ರಚಾರ ಮಾಡಿ ಎಂದು ಉದಯಗೌಡ್ರು ಕೇಳಿಕೊಂಡಿದ್ದರು ಎಂದರು.
ಮೊದಲು ಕರೆದಿದ್ದರಿಂದ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ನಿಮ್ಮ ಅತ್ಯಮೂಲ್ಯ ಮತವನ್ನು ಅವರಿಗೆ ನೀಡಿ. ನರೇಂದ್ರ ಹಾಗೂ ಉದಯ್ ಅವರ ಕೈ ಬಲಪಡಿಸುವಂತೆ ದರ್ಶನ್ ಕೇಳಿಕೊಂಡಿದ್ದಾರೆ.