ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಪ್ರಸಿದ್ಧ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಯಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಶಾಸಕ ಹೆಚ್.ಡಿ. ರೇವಣ್ಣ ಅವರು ಅಂತಿಮ ವಿಧಿವಿಧಾನಗಳ ಸಿದ್ಧತೆಯ ಜಾಗವನ್ನು ಖುದ್ದಾಗಿ ಪರಿಶೀಲಿಸಿದ್ದಾರೆ.
ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ರೇವಣ್ಣ
ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರೇವಣ್ಣ, ತಾಯಿಯನ್ನು ನೆನೆದು ತೀವ್ರ ಭಾವುಕರಾದರು. “ನನ್ನ ತಾಯಿ ಚೆನ್ನಮ್ಮ ನನಗೆ ಕೇವಲ ತಾಯಿಯಲ್ಲ, ಸಾಕ್ಷಾತ್ ದೇವತೆ. ಇವತ್ತು ನಾನು ನನ್ನ ದೇವರನ್ನೇ ಕಳೆದುಕೊಂಡಿದ್ದೇನೆ” ಎಂದು ಹೇಳುತ್ತಾ ಮಾಧ್ಯಮಗಳ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕೊನೆಯ ಕ್ಷಣದ ನೆನಪು ಹಂಚಿಕೊಂಡ ಶಾಸಕ
ತಾಯಿಯ ದಾನಗುಣವನ್ನು ಸ್ಮರಿಸಿದ ಅವರು, “ನಮ್ಮ ಅಮ್ಮ ಎಷ್ಟೋ ಜನರಿಗೆ ಹಸಿದಾಗ ಅನ್ನ ಹಾಕಿದ ಪುಣ್ಯವತಿ. ಕೊನೆಯದಾಗಿ ನಾನು ಅವರಿಗೆ ತಿರುಪತಿ ಪ್ರಸಾದ ನೀಡಿ ಮಾತನಾಡಿಸಿದ್ದೆ. ನಿನ್ನೆ ಬೆಳಗ್ಗೆ ತಾನೆ ವೈದ್ಯರು ಚೆನ್ನಮ್ಮ ಅವರು ಗುಣಮುಖರಾಗುತ್ತಾರೆ ಎಂದು ಭರವಸೆ ನೀಡಿದ್ದರು. ಆದರೆ, ಅವರು ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಊಹಿಸಿರಲಿಲ್ಲ” ಎನ್ನುತ್ತಾ ರೇವಣ್ಣ ದುಃಖ ತಡೆಯಲಾರದೆ ಕಣ್ಣೀರು ಹಾಕಿದರು.



