ಹೊಸದಿಗಂತ ಡಿಜಿಟಲ್ ಡೆಸ್ಕ್:
I.N.D.I.A ಮೈತ್ರಿ ಕೂಟವು ದೆಹಲಿಯ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮನೆಯಲ್ಲಿ ಇಂದು ಮೊದಲ ಸಮನ್ವಯ ಸಭೆ ನಡೆಸಿದೆ.
ಮುಂದಿನ ಸಭೆಯನ್ನು ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸೀಟು ಹಂಚಿಕೆ, ಹೋರಾಟದ ತಂತ್ರ ಸೇರಿದಂತೆ ಹಲವು ವಿಚಾರಗಳು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆಗೆ ತಯಾರಿ ಚುರುಕುಗೊಳಿಸಿರುವ ಇಂಡಿಯಾ ಮೈತ್ರಿ ಒಕ್ಕೂಟ ಇದೀಗ ಮೊದಲ ಚುನಾವಣಾ ರ್ಯಾಲಿ ಘೋಷಿಸಿದೆ. ಭೋಪಾಲ್ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಚುನಾವಣಾ ರ್ಯಾಲಿ ಆಯೋಜಿಸಲಾಗಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಮೈತ್ರಿ ಪಕ್ಷಗಳು ರ್ಯಾಲಿ ನಡೆಸಲಿದೆ.
I.N.D.I.A ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಮನ್ವಯ ಸಮಿತಿಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸದಸ್ಯ ಪಕ್ಷಗಳು ಮಾತುಕತೆ ನಡೆಸಿ ಶೀಘ್ರದಲ್ಲೇ ಈ ಬಗ್ಗೆ ಒಂದು ಇತ್ಯರ್ಥಕ್ಕೆ ಬರಲಿವೆ. ಕೂಟದ 4ನೇ ಸಭೆಯನ್ನು ಮಧ್ಯಪ್ರದೇಶದ ಭೋಪಾಲ್ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮಾತನಾಡಿ, ಕೂಟದ ಸದಸ್ಯರು ಈಗಾಗಲೇ ಹೊಂದಿರುವ ಸ್ಥಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಾವು ಬಿಜೆಪಿ, ಎನ್ಡಿಎ ಹೊಂದಿರುವ ಸ್ಥಾನಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೇ, ಎರಡೂ ಮೈತ್ರಿಕೂಟಗಳ ಭಾಗವಾಗಿರದ ಪಕ್ಷಗಳ ಬಗ್ಗೆಯೂ ಕಣ್ಣಿಡಬೇಕಿದೆ ಎಂದಿದ್ದಾರೆ.