ಬಾಂಗ್ಲಾ ವಲಸಿಗರು ಭಾರತಕ್ಕೆ ಬರಲು ಬಯಸಿದರೆ ಅಕ್ರಮವಾಗಿ ಬರಲಿ: ವಿವಾದಾತ್ಮಕ ಹೇಳಿಕೆ ನೀಡಿದ ಪಿತ್ರೋಡಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶಿ ವಲಸಿಗರು ಒಂದು ವೇಳೆ ಭಾರತಕ್ಕೆ ಬರಲು ಬಯಸಿದರೆ, ಅದು ಅಕ್ರಮವಾಗಿದ್ದರೂ ಸಹ ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅಕ್ರಮ ವಲಸಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಪ್ತ ಸಹಾಯಕ ಸ್ಯಾಮ್ ಪಿತ್ರೋಡಾ, ಅಕ್ರಮ ವಲಸಿಗರು ಭಾರತದಲ್ಲಿ ನೆಲೆಸಬೇಕೆಂದು ಪ್ರತಿಪಾದಿಸಿದರು. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಬಾಂಗ್ಲಾದೇಶದ ವಲಸಿಗರು ಇಲ್ಲಿಗೆ ಬರಲು ಬಯಸಿದರೆ ಅಕ್ರಮವಾಗಿಯಾದರೂ ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ಅದರಿಂದ ನಾವು ಸ್ವಲ್ಪ ಅನುಭವಿಸಬೇಕಾದರೂ ಪರವಾಗಿಲ್ಲ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಟೀಕಿಸಿದ ಸ್ಯಾಮ್ ಪಿತ್ರೋಡಾ, ಸರ್ಕಾರವು ವಲಸೆಯನ್ನು ನಿಭಾಯಿಸುವ ಬದಲು ಜಾಗತಿಕ ತಾಪಮಾನದ ಏರಿಕೆಯಂತಹ ಸಾರ್ವಜನಿಕರಿಗೆ ಮುಖ್ಯವಾದ ಸಮಸ್ಯೆಗಳನ್ನು ಪರಿಹರಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ ಈ ರೀತಿ ವಿವಾದಕ್ಕೆ ಸಿಲುಕಿದ್ದು ಇದೇ ಮೊದಲಲ್ಲ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಈಶಾನ್ಯ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣ ಭಾಗದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಜನಾಂಗೀಯ ಹೇಳಿಕೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!