ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಗೋಹತ್ಯೆ ಏನಾದ್ರೂ ನಡೆದರೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹಾಕ್ತೀವಿ ಎಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಗುಡುಗಿದ್ದಾರೆ.
ಹೊನ್ನಾವರದ ಸಾಲಕೋಡು ಅರಣ್ಯದಲ್ಲಿ ಗರ್ಭ ಧರಿಸಿದ ಗೋಹತ್ಯೆ ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಹತ್ಯೆ ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲೂ ಜಿಲ್ಲೆಯಲ್ಲಿ ಗೋಹತ್ಯೆ ಆಗಿದೆ ಎಂದು ತಿಳಿಸಿದ್ದಾರೆ.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ದಿನಕರ ಶೆಟ್ಟಿ ಈಗ ಏನು ದಿನಕರ ಖಾನ್ ಆಗಿದ್ದಾರಾ? ದಿನಕರ ಶೆಟ್ಟಿ ಅವರೇ ನಮ್ಮ ಸಿಎಂ ಬಗ್ಗೆ, ಸಚಿವರ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡಬೇಡಿ. ಗೋವುಗಳ ಹಂತಕರನ್ನು ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ. ಆರೋಪಿಗಳನ್ನ ಕೂಡಲೇ ಬಂಧಿಸಿ ಶಿಕ್ಷೆ ನೀಡುವಂತೆ ಹೇಳಿದ್ದೇನೆ. ಪೊಲೀಸರು ಆರೋಪಿಗಳನ್ನ ಬಂಧಿಸಿ ಅದರ ಮುಂದೆ ಇನ್ನೊಂದ ಹೆಜ್ಜೆ ಇಟ್ಟಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ಗೋವು ಕಳ್ಳತನ, ಗೋಹತ್ಯೆ ಆಗಬಾರದು. ಗೋಹತ್ಯೆ ಏನಾದ್ರೂ ನಡೆದರೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡ ಹಾಕ್ತೀವಿ ಎಂದು ಎಚ್ಚರಿಸಿದ್ದಾರೆ.