ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನೇತೃತ್ವದ ಮೋದಿ ಸರ್ಕಾರವು ಕರ್ನಾಟಕದಲ್ಲಿ ನೀರಾವರಿ, ಕೃಷಿ ಅಭಿವೃದ್ಧಿ ಸೇರಿದಂತೆ ಎಲ್ಲದರ ವಿರುದ್ಧ ನಿಂತಿದೆ ಮತ್ತು ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ತಾಲೂಕಿನ ಕಿಬ್ಬನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರವಾಗಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಳೆದ ಬಾರಿ 25 ಬಿಜೆಪಿ ಸಂಸದರು ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು, ಆದರೆ ಸಂಸತ್ತಿನಲ್ಲಿ ಒಬ್ಬರೂ ಕರ್ನಾಟಕಕ್ಕೆ ಕೇಂದ್ರದಿಂದ ಅಭಿವೃದ್ಧಿ, ನೀರಾವರಿ, ಬರ ಇತ್ಯಾದಿಗಳಿಗೆ ಅನುದಾನ ನೀಡುವ ಬಗ್ಗೆ ಪ್ರಸ್ತಾಪಿಸಲಿಲ್ಲ.
ಈ ಸಂಸದರೆಲ್ಲ ಮೋದಿ ಕಂಡರೆ ಗಡಗಡ ನಡುಗುತ್ತ ಪಕ್ಕಕ್ಕೆ ಸರಿಯುತ್ತಿದ್ದರು. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ, ಕರ್ನಾಟಕ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ಹಣವನ್ನೂ ನೀಡದೆ ವಂಚಿಸಿದ್ದಾರೆ. ಬರದಂತ ಪ್ರಮುಖ ಸಮಸ್ಯೆಗೂ ನಯಾಪೈಸೆ ಹಣ ನೀಡಿಲ್ಲದ ಇವರಿಗೆ ಯಾವುದೇ ಕಾರಣಕ್ಕೂ ಮತ ನೀಡಕೂಡದು ಎಂದರು.