ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿರುವ ಸ್ವಪಕ್ಷೀಯ ಶಾಸಕರ ವಿರುದ್ಧ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಿಮಗೆ ಜೆಡಿಎಸ್ನಲ್ಲಿ ಭವಿಷ್ಯ ಇಲ್ಲ ಅನಿಸಿದರೆ ಧೈರ್ಯವಾಗಿ ಈಗಲೇ ಕಾಂಗ್ರೆಸ್ ಸೇರಿಕೊಳ್ಳಿ. ಆದರೆ, ಪಕ್ಷದಲ್ಲಿದ್ದುಕೊಂಡು ಈ ರೀತಿಯ ಬೆನ್ನಿಗೆ ಇರಿಯುವ ಕೆಲಸ ಮಾಡಬೇಡಿ” ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.
ದೆಹಲಿ ಮಟ್ಟಕ್ಕೆ ತಲುಪಿದ ಅಡ್ಡ ಮತದಾನದ ವಿವಾದ
ಕ್ರಾಸ್ ವೋಟಿಂಗ್ ಮಾಡಿದವರನ್ನು ಪತ್ತೆಹಚ್ಚಲು ಬಿಜೆಪಿ ಈಗಾಗಲೇ ಸಿ.ಟಿ. ರವಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವೂ ಶೀಘ್ರದಲ್ಲೇ ದೆಹಲಿಗೆ ತೆರಳಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ, ಈ ಇಡೀ ಬೆಳವಣಿಗೆಯ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಚ್ಡಿಕೆ ಮುಂದಿನ ಗುರಿ ‘ಮಿಷನ್ 2028’
ಬಂಡಾಯ ಶಾಸಕರ ವಿರುದ್ಧ ಅಂತಿಮ ತೀರ್ಮಾನ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷವು ತಮಗೆ ನೀಡಿದೆ ಎಂದ ಕುಮಾರಸ್ವಾಮಿ, ಈ ವಿವಾದವನ್ನು ಹೆಚ್ಚು ದಿನ ಎಳೆಯುವುದಿಲ್ಲ ಎಂದಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ತಮಗೆ ಮುಖ್ಯವಲ್ಲ ಎಂದ ಅವರು, “ನನ್ನ ಸಂಪೂರ್ಣ ಗಮನ 2028ರ ವಿಧಾನಸಭೆ ಚುನಾವಣೆಯ ಮೇಲಿದೆ. ರಾಜ್ಯದಲ್ಲಿರುವ ಈ ಕೆಟ್ಟ ಸರ್ಕಾರವನ್ನು ತೊಲಗಿಸಿ, ಜನಪರ ಆಡಳಿತ ತರುವುದೇ ನನ್ನ ಏಕೈಕ ಗುರಿ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.



