ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಜೂನ್ 16ಕ್ಕೆ ಗಂಗಾದಸರಾ, 17ಕ್ಕೆ ಬಕ್ರೀದ್, 18ಕ್ಕೆ ಜ್ಯೇಷ್ಠ ಮಾಸದ ಮಂಗಲೋತ್ಸವ ಉತ್ತರ ಪ್ರದೇಶದಲ್ಲಿ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
24X7 ಕೆಲಸ ಮಾಡುವಂತೆ ಹಾಗೂ ಎಲ್ಲ ಕಡೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಅದೇ ರೀತಿ 17ಕ್ಕೆ ಬಕ್ರೀದ್ ಇರುವ ಕಾರಣ ಒಂದು ಮಾರ್ಗಸೂಚಿಯನ್ನು ನೀಡಿದ್ದಾರೆ. ಬಕ್ರೀದ್ ಸಂಪ್ರಾದಾಯದಂತೆ ಆಚರಣೆ ಮಾಡಲಿ, ಆದರೆ ರಸ್ತೆ ಬಂದ್ ಮಾಡಿ ನಮಾಜ್ ಮಾಡುವುದು ಅಥವಾ ಮಾರ್ಗ ಮಧ್ಯೆ ಪ್ರಾಣಿಗಳ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ನಿಗದಿಪಡಿಸಿರುವ ಸ್ಥಳದಲ್ಲೇ ನಮಾಜ್ ಮಾಡಬೇಕು ಹಾಗೂ ಪ್ರಾಣಿ ಬಲಿ ನೀಡಬೇಕು ಎಂದು ಆದೇಶ ನೀಡಿದ್ದಾರೆ.
ಪ್ರಾಣಿ ಬಲಿ ನೀಡುವ ಮುನ್ನ ಸ್ಥಳೀಯ ಅಧಿಕಾರಿಗಳ ಜತೆಗೆ ಚರ್ಚೆ ಮಾಡಬೇಕು ಹಾಗೂ ಬಲಿ ನೀಡುವ ಮೊದಲು ಅಧಿಕಾರಿಗಳ ಒಪ್ಪಿಗೆ ಪಡೆಯಬೇಕು ಎಂದು ಹೇಳಿದ್ದಾರೆ.
ವಿವಾದಿತ, ಸೂಕ್ಷ್ಮ ಪ್ರದೇಶದಲ್ಲಿ ಪ್ರಾಣಿ ಬಲಿ ನೀಡಬಾರದು. ನಿಷೇಧಿತ ಪ್ರದೇಶದಲ್ಲಿ ಪ್ರಾಣಿ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಯೋಗಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇನ್ನು ಪ್ರಾಣಿ ಬಲಿಯಾದ ನಂತರ ಪ್ರತಿ ಜಿಲ್ಲೆಯಲ್ಲೂ ತ್ಯಾಜ್ಯ ವಿಲೇವಾರಿಯಾಗಬೇಕು. ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಮಾಜ್ ಮುಸ್ಲಿಂ ಸಂಪ್ರಾದಾಯದಂತೆ ನಡೆಯಲಿ, ಆದರೆ ಅದು ರಸ್ತೆ ಮಧ್ಯೆ ಅಲ್ಲ, ಅಧಿಕಾರಿಗಳು ಸೂಚಿಸಿದ ಪ್ರದೇಶದಲ್ಲಿ ಮಾಡಬೇಕು. ಯಾವುದೇ ಹೊಸ ಸಂಪ್ರಾದಾಯವನ್ನು ಪೋತ್ಸಾಹಿಸಬೇಡಿ, ಹಾಗೂ ಅವರ ನಂಬಿಕೆಯನ್ನು ಗೌರವಿಸಿ ಎಂದು ಹೇಳಿದ್ದಾರೆ. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.