ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ನಡೆಯುತ್ತಿರುವ ಬಾರ್ ನ ಪರವಾನಗಿಯನ್ನು ನಕಲಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಈ ಪರವಾನಗಿಯನ್ನು ನಕಲಿ ರೀತಿಯಲ್ಲಿ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಮೃತಿ ಇರಾನಿಯನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಆದರೆ, ಸ್ಮೃತಿ ಇರಾನಿ ಪುತ್ರಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ಕಾಂಗ್ರೆಸ್ ಆರೋಪದ ಬಗ್ಗೆ ಕೇಂದ್ರ ಸಚಿವೆಯ ಪುತ್ರಿ ಝೋಯಿಷ್ ಇರಾನಿ ಪರ ವಕೀಲ ಕೀರತ್ ನಾಗ್ರಾ ಪ್ರತಿಕ್ರಿಯೆ ನೀಡಿದ್ದು, ನನ್ನ ಕಕ್ಷಿದಾರೆ ‘ಸಿಲ್ಲಿ ಸೋಲ್ಸ್ ಗೋವಾ’ ಎಂಬ ಯಾವುದೇ ರೆಸ್ಟೋರೆಂಟ್ನ ಮಾಲೀಕರಲ್ಲ ಅಥವಾ ಅದನ್ನು ನಡೆಸುತ್ತಲೂ ಇಲ್ಲ. ಹಾಗೂ, ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಹಾಗೆ ಯಾವುದೇ ಶೋಕಾಸ್ ನೋಟಿಸ್ ಸಹ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
‘ನಮ್ಮ ಕಕ್ಷಿದಾರರ ತಾಯಿ, ಹೆಸರಾಂತ ರಾಜಕಾರಣಿ ಸ್ಮೃತಿ ಇರಾನಿ ಅವರ ವಿರುದ್ಧ ಮಾಡುತ್ತಿರುವ ರಾಜಕೀಯ ಪ್ರೇರಿತ ಆರೋಪವಿದು. ಅವರ ವಿರುದ್ಧದ ಎಲ್ಲ ಕ್ಷುಲ್ಲಕ, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಪ್ರತಿಯೊಂದೂ ಸುಳ್ಳುಗಳಿಂದ ಕೂಡಿದೆ’ ಎಂದು ವಕೀಲ ಕೀರತ್ ನಾಗ್ರಾ ಹೇಳಿದರು.
ಕಾಂಗ್ರೆಸ್ ಹೇಳೋದೇನು?
ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಪುತ್ರಿ ಅಕ್ರಮ ಬಾರ್ ಅನ್ನು ನಡೆಸುತ್ತಿದ್ದಾರೆ. ಅಲ್ಲದೆ, ಇದು ಬಹಳ ಗಂಭೀರವಾದ ವಿಚಾರವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಆ ಬಾರ್ಗೆ ನೀಡಿರುವ ಶೋಕಾಸ್ ನೋಟಿಸ್ನ ಪ್ರತಿಯನ್ನು ಸಹ ಕಾಂಗ್ರೆಸ್ ಶೇರ್ ಮಾಡಿದೆ. ಹಾಗೂ, ಬಾರ್ ವಿರುದ್ಧ ನೋಟಿಸ್ ನೀಡಿದ ಅಬಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದೂ ಕಾಂಗ್ರೆಸ್ ಹೇಳಿಕೊಂಡಿದೆ.