ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆನೆದಂತ ಹಾಗೂ ದಂತದಿಂದ ಮಾಡಿದ ವಸ್ತುಗಳನ್ನು ಸಂಗ್ರಹಿಸಿದ್ದ ಪ್ರಕರಣದಲ್ಲಿ ಮೋಹನ್ಲಾಲ್ಗೆ (Mohan Lal) ವಿರುದ್ಧ ಮುಂದಿನ ಆರು ತಿಂಗಳ ಕಾಲ ಯಾವುದೇ ಕ್ರಮ ಜರುಗಿಸದಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನಿಬ್ಬರು, ತಮ್ಮನ್ನು ಆರೋಪ ಮುಕ್ತರನ್ನಾಗಿ ಮಾಡುವಂತೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದೆ.
2011ರಲ್ಲಿ ಮೋಹನ್ಲಾಲ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭನಿವಾಸದಲ್ಲಿ ನಾಲ್ಕು ಆನೆದಂತ ಹಾಗೂ ಆನೆದಂತದಿಂದ ಮಾಡಲಾಗಿದ್ದ 13 ವಿವಿಧ ಕರಕುಶಲ ವಸ್ತುಗಳು ಬರಾಮತ್ತಾಗಿದ್ದವು. ಕೇರಳ ಅರಣ್ಯ ಹಾಗೂ ವನ್ಯಜೀವಿ ಇಲಾಖೆಯು ಮೋಹನ್ಲಾಲ್ ವಿರುದ್ಧ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಇತ್ತೀಚೆಗೆ 2019ರಲ್ಲಿ ಎರ್ನಾಕುಲಂನ ಮೆಕ್ಕಪ್ಪಾಲ ಅರಣ್ಯ ಠಾಣೆಯು ಮೋಹನ್ಲಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆ ಕುರಿತು ಪೆರಂಬೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಮೋಹನ್ಲಾಲ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಮೋಹನ್ಲಾಲ್ ವಿರುದ್ಧ ಮುಂದಿನ ಆರು ತಿಂಗಳ ವರೆಗೆ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿದೆ.