ಹೊಸದಿಗಂತ ವರದಿ,ಹಲಗೂರು :
ಅಕ್ರಮವಾಗಿ ಕಡವೆಯನ್ನು ಬೇಟೆಯಾಡಿ, ಮಾಂಸವನ್ನು ಸಾಗಿಸುತ್ತಿದ್ದ ಬಸವನಹಳ್ಳಿ ಗ್ರಾಮದ ಪ್ರಕಾಶ್ ಎಂಬಾತನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಆಗಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಬಸವನ ಬೆಟ್ಟ ಅರಣ್ಯ ಪ್ರದೇಶದ ನೀರಳ್ಳದ ಕೆರೆಗೆ ಹೋಗುವ ಮಾರ್ಗದಲ್ಲಿ ಸಿಬ್ಬಂದಿ ಗಸ್ತು ಮಾಡುತ್ತಿದ್ದಾಗ ರಸ್ತೆಯ ಸಮೀಪದಲ್ಲಿ ಸ್ಕೂಟರ್ ನಿಲ್ಲಿಸಿರುವುದನ್ನು ಗಮನಿಸಿದ್ದಾರೆ. ಸಿಬ್ಬಂದಿ ಅರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದಾಗ ಅನುಮಾನಸ್ಪದವಾಗಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಹಿಡಿದು ಓಡಾಡುತ್ತಿದ್ದ ಪ್ರಕಾಶ್ ಕಾಣಿಸಿಕೊಂಡಿದ್ದಾನೆ. ಸಿಬ್ಬಂದಿ ಅವನನ್ನು ತಡೆದು ವಿಚಾರಣೆ ಮಾಡಿದಾಗ ಬಸವನಹಳ್ಳಿ ಗ್ರಾಮದ ಸಿದ್ದಪ್ಪ, ಶಿವರಾಮ, ಕೆಂಪ, ಮಹಾದೇವು (ಕುಳ್ಳ) ಎಂಬುವರೊಂದಿಗೆ ಕಡವೆ ಬೇಟೆ ಮಾಡಿ ಮಾಂಸ ಹಂಚಿಕೊಂಡಿದ್ದು, ನನ್ನ ಪಾಲಿನ ಮಾಂಸ ಕೊಂಡೊಯ್ಯುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅರಣ್ಯ ಇಲಾಖೆ ಸಿಬ್ಬಂದಿ ಬಂಧಿತ ಆರೋಪಿ ಪ್ದಕಾಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಉಳಿದ ನಾಲ್ವರು ಆರೋಪಿಗಳಾದ ಸಿದ್ದಪ್ಪ, ಶಿವರಾಮ, ಕೆಂಪ, ಮಹಾದೇವು (ಕುಳ್ಳ) ಅವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕನಕಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ನಾಗೇಂದ್ರ ಪ್ರಸಾದ್ ಮಾತನಾಡಿ ಬಸವನ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸುಮಾರು 10 ವರ್ಷದ ಹೆಣ್ಣು ಕಡವೆಗೆ ಉರುಳು ಹಾಕಿ ಅದನ್ನು ಸಾಯಿಸಿ ನಂತರ ಮಾಂಸವನ್ನು ಹಂಚಿಕೊಂಡು ಹೋಗುತ್ತಿದ್ದ ಆರೋಪಿಗಳಲ್ಲಿ ಒಬ್ಬನಾದ ಪ್ರಕಾಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ವಿಚಾರಣೆಗಾಗಿ ಅನುಮತಿ ಪಡೆದು ಕರೆತರುತ್ತೇವೆ ನಂತರ ಉಳಿದ ಆರೋಪಿಗಳನ್ನು ಅತಿ ಶೀಘ್ರದಲ್ಲೇ ಕಾರ್ಯಾಚರಣೆ ನಡೆಸಿ ಬಂಧಿಸಿ ಕೇಸು ದಾಖಲೆಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ. ಮತ್ತು ಕಡವೆ ಚರ್ಮವನ್ನು ಹಾಗೂ ಮಾಂಸವನ್ನು ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು
ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ಉಪ ವಿಭಾಗ ಅಧಿಕಾರಿ ಎಸ್.ನಾಗೇಂದ್ರ ಪ್ರಸಾದ್, ಕಾವೇರಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ರವಿ ಬುರ್ಜಿ, ಉಪವಲಯ ಅರಣ್ಯ ಅಧಿಕಾರಿ ಪ್ರವೀಣ್ ಕುಮಾರ್, ಅರಣ್ಯ ಪಾಲಕ ಪ್ರಕಾಶ್, ಸಿದ್ದರಾಮ ಪೂಜಾರಿ, ಸಿಬ್ಬಂದಿಗಾಳದ ಶಿವಣ್ಣ, ಮಂಜು,ವೆಂಕಟೇಶ್, ಪಡಿಯಪ್ಪ, ಜೀಪ್ ಚಾಲಕ ಬಾಲರಾಜು ಸೇರಿದಂತೆ ಹಲವರು ಇದ್ದರು.