ಹೊಸ ದಿಗಂತ ವರದಿ, ಕುಶಾಲನಗರ:
ಕಾಫಿ ತೋಟದಲ್ಲಿದ್ದ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು, ಲಾರಿ ಸಹಿತ ಮಾಲನ್ನು ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು, ಇತರ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.
ವಾಲ್ನೂರು ತ್ಯಾಗತ್ತೂರು ಗ್ರಾಮದ ಅವರನ್ ಎಂಬವರ ಪುತ್ರ ಪಿ.ಎ.ಇಬ್ರಾಹಿಂ(31), ಸಿ.ಎ.ಚಂಗಪ್ಪ ತಲೆ ಮರೆಸಿಕೊಂಡವರಾಗಿದ್ದು, ಅದೇ ಗ್ರಾಮದ ಪಿ. ಎ ಸಿದ್ಧಿಕ್ (34) ಬಂಧನಕ್ಕೊಳಗಾಗಿದ್ದಾನೆ.
ಕೊಡಗು ಅರಣ್ಯ ವೃತ್ತದ ಮಡಿಕೇರಿ ವಿಭಾಗದ ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆ ವ್ಯಾಪ್ತಿಯ ವಾಲ್ಕೂರು ತ್ಯಾಗತ್ತೂರು ಗ್ರಾಮದ ಸಿ.ಎ.ಪೂವಯ್ಯ ಎಂಬವರ ಕಾಫಿ ತೋಟದಲ್ಲಿ ನಾಲ್ಕು ಬೀಟೆ ಮರಗಳನ್ನು ಕಡಿದು, ನಾಟಾಗಳನ್ನಾಗಿ ಪರಿವರ್ತಿಸಿ ಲಾರಿಗೆ ತುಂಬಿಸಿ ಸಾಗಿಸುತ್ತಿದ್ದಾಗ ಕುಶಾಲನಗರ ವಲಯದ ಸಿಬ್ಬಂದಿಗಳು ದಾಳಿ ಮಾಡಿ ಲಾರಿ ಹಾಗೂ ಲಾರಿಯಲ್ಲಿ ತುಂಬಲಾದ ಆರು ಬೀಟೆ ಮರದ 0.872ಘ.ಮೀ).ನಾಟಾಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ (ಕೆ ಎ-52-ಎ-1441) ಲಾರಿ ಹಾಗೂ ಸಾಗಾಟ ವಾಹನಕ್ಕೆ ಬೆಂಗಾವಲಾಗಿದ್ದ ಮಾರುತಿ ಬಲೆನೋ (ಕೆಎಲ್-86-ಸಿ-3957)ಕಾರು ಮತ್ತು ಒಳಗೆ ಇದ್ದ ಮರ ಕಟಿಂಗ್ ಮೆಷಿನ್, ನೈಲಾನ್ ಹಗ್ಗ ಹಾಗೂ ಇತರೆ
ಸಾಮಾಗ್ರಿಗಳನ್ನು ವಶ ಪಡಿಸಿಕೊಳ್ಳಲಾಗಿದೆ