ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರ ಜುನೈದ್ ಅಹ್ಮದ್ ಪತ್ತೆಗೆ ಎನ್ಐಎ ಈಗಾಗಲೇ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದೆ. ಈ ಹಣಕ್ಕಾಗಿ ಅಲ್ಲ ದೇಶಸೇವೆ ಎಂದುಕೊಂಡು ಉಗ್ರನ ಸುಳಿವು ನೀಡಿ ಎಂದು ಬೆಂಗಳೂರಿನ ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಮನವಿ ಮಾಡಿದ್ದಾರೆ.
ಸಮುದಾಯದ ಎಲ್ಲರೂ ನನ್ನ ಮನವಿಯನ್ನು ಕೇಳಿ ಹಣದ ಆಸೆಗಾಗಿ ಕಾಯಬೇಡಿ, ಏನೇ ಸುಳಿವು ಸಿಕ್ಕರೂ ಮಾಹಿತಿ ನೀಡಿ. ಇಸ್ಲಾಂ ಧರ್ಮವು ಎಂದಿಗೂ ಭಯೋತ್ಪಾದಕ ಕೃತ್ಯಗಳನ್ನು ಅಥವಾ ಅಮಾಯಕರ ಕೊಲೆಯನ್ನು ಬೆಂಬಲಿಸುವುದಿಲ್ಲ.ಬಹುಮಾನಕ್ಕಾಗಿ ನೋಡದೆ, ಸಮಾಜಕ್ಕೆ ಹಾನಿ ಮಾಡುವವರನ್ನು ಹಿಡಿಯಲು ಸಹಕರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದ್ದಾರೆ.
ಇದೇ ಸಂದೇಶವನ್ನು ರಾಜ್ಯದಲ್ಲಿರುವ ಎರಡು ಸಾವಿರ ಮಸೀದಿಗಳಲ್ಲಿ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.



