ಹೊಸ ದಿಗಂತ ವರದಿ,ಮಂಗಳೂರು:
ವೆಂಕಟೇಶ್ ಬಂಟ್ವಾಳ್
1923 ರ ಆಗಸ್ಟ್ 7 ಮತ್ತು 8 ರಂದು ಸದ್ಗುರು ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿಯವರು ನೇತ್ರಾವತಿ ನದಿ ತಟದಲ್ಲಿರುವ ಬಂಟ್ವಾಳಕ್ಕೆ ಪಾದರ್ಪಣೆಗೈದು ಶತಮಾನ ತುಂಬಿದ ವೇಳೆಯಲ್ಲಿಯೇ ನೇತ್ರಾವತಿ ನದಿ ತುಂಬಿ ಹರಿದು ಇಡೀ ಬಂಟ್ವಾಳ ಪೇಟೆಯನ್ನೇ ಅಪೋಶನ್ ತೆಗೆದುಕೊಂಡ ವಿದ್ಯಮಾನಕ್ಕೆ ಶತಮಾನ ಪೂರೈಸಿತ್ತು.
ಇದೀಗ ಐವತ್ತು ವರ್ಷದ ಹಿಂದೆ ಅಂದರೆ 1974 ರ ಜುಲೈ ತಿಂಗಳಲ್ಲಿ ನೇತ್ರಾವತಿಯ ರೌದ್ರವತಾರಕ್ಕೆ ಬಂಟ್ವಾಳ ದ್ವೀಪವಾಗಿದ್ದಲ್ಲದೆ, ಹಲವಾರು ಮನೆಗಳು ಕುಸಿದ ಘಟನೆಗಳನ್ನು ಹಿರಿಯರು ಮೆಲುಕು ಹಾಕುತ್ತಿದ್ದಾರೆ.
1923 ರ ನೆರೆಯ ಮಾಹಿತಿ ಭಗವಾನ್ ನಿತ್ಯಾನಂದ ಪುಸ್ತಕ, ಶಿಲಾಕಲ್ಲಿನಲ್ಲಿ ಈಗಲು ಲಭ್ಯವಿದ್ದರೆ, 1974 ರ ಜು.26 ರಂದು ಬಂದಂತ ನೆರೆಯ ಕಂಡ ಪ್ರತ್ಯಕ್ಷದರ್ಶಿಗಳು ಸಾಕಷ್ಟು ಮಂದಿ ಸಿಗುತ್ತಾರೆ.
ಈಗಿನ ತಲೆಮಾರಿಗೂ ಇದರ ಸ್ಪಷ್ಟ ಅರಿವಿದೆ. ಐವತ್ತು ವರ್ಷಗಳ ಹಿಂದೆ ನೇತ್ರಾವತಿಯಲ್ಲಿ 8 ರಿಂದ 8.5 ಮೀ ನೀರು ತುಂಬಿ ಹರಿಯಿತೆಂದರೆ ಬಂಟ್ವಾಳ ಪೇಟೆಯನ್ನು ನೀರು ಅವರಿಸಿತೆಂದೆ ಹಿರಿಯರ ಲೆಕ್ಕಾಚಾರ. ಆದರೆ ಈಗ 9 ಮೀ.ನಲ್ಲಿ ನೀರು ತುಂಬಿ ಹರಿದರೂ ಬಂಟ್ವಾಳ ಪೇಟೆಗೆ ನೀರು ನುಗ್ಗಲು ಆರಂಬಿಸುವುದಷ್ಟೆ ಆಗಿರುತ್ತದೆ. ಆದರೆ ಬಂಟ್ವಾಳದ ಸುತ್ತಮುತ್ತಲಿನ ತಗ್ಗುಪ್ರದೇಶಗಳನ್ನು ನೀರು ಅವರಿಸುತ್ತದೆ.
ಶುಕ್ರವಾರವು ಅಂದರೆ ಜು.19ರಂದು ಅಪಾಯದ ಮಟ್ಟವನ್ನು ದಾಟಿ ನೀರು ಹರಿಯಿತಾದರೂ ಬಂಟ್ವಾಳ ಪೇಟೆಗೆ ನೀರು ನುಗ್ಗಲಿಲ್ಲ, ಯಾಕೆಂದರೆ ನೇತ್ರಾವತಿ ಯಲ್ಲಿ ನಡೆಯುವ ಮರಳುಗಾರಿಕೆಯಿಂದ ಅಳ, ಅಗಲವಾಗಿರುವುದರಿಂದ ನೀರು ತುಂಬಿ ಹರಿಯಲು ಘಟ್ಟಪ್ರದೇಶದಿಂದ ಸಾಕಷ್ಟು ನೀರು ಹರಿದು ಬರಬೇಕಾಗು ತ್ತದೆ. 1974 ರ ಜು.26 ಕ್ಕೆ ವಾರದ ಮೊದಲೇ ನೇತ್ರಾವತಿ ಮೈದುಂಬಿ ಹರಿಯುವ ಮೂಲಕ ಐವತ್ತು ವರ್ಷದ ಹಿಂದಿನ ತನ್ನ ರೌದ್ರಾವತಾರ ತೋರಿಸಲು ಯತ್ನಿಸುತ್ತಿದೆ.
1974 ರಲ್ಲಿ ಬಂದಿದ್ದ ನೆರೆಯ ಪ್ರಮಾಣಕ್ಕೆ ಬಂಟ್ವಾಳವೆಂಬ ಪುಟ್ಟ ಊರು ಮುಳುಗಡೆಯಾಗಿ ದ್ವೀಪವಾಗಿ ಗೋಚರಿಸಿತ್ತು. ಪೇಟೆಯಲ್ಲಿದ್ದ ಅಂಗಡಿ, ಮನೆಗಳು, ಜಾನುವಾರು, ಕೃಷಿ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಪರಿಣಾಮ ಬಂಟ್ವಾಳದ ಜನತೆ ದಿಕ್ಕು ಕಾಣದೆ ಕಂಗಾಲಾಗಿದ್ದರು.
ಹಿರಿಯರು ಶ್ರಮಪಟ್ಟು ನಿರ್ಮಿಸಿದ ಮಣ್ಣಿನ ಗೋಡೆಯ ಮನೆಗಳು ನೀರಿನ ರಭಸಕ್ಕೆ ಕಣ್ಣಮುಂದೆ ಕುಸಿಯುವ , ಸೊತ್ತುಗಳು ನೀರಿನಲ್ಲಿ ಕೊಚ್ಚಿ ಹೋಗುವ ದ್ರಶ್ಯಗಳು ಈಗಲು ನೆರೆಯ ಸಂದರ್ಭಗಳಲ್ಲೇ ಕಣ್ಣಮುಂದೆ ಬಂದು ನಿಲ್ಲುತ್ತವೆ ಎಂದು ಹಿರಿಯರೋರ್ವರು ನೆನಪಿಸುತ್ತಾರೆ. ಆ ಸಂದರ್ಭ ಬಂಟ್ವಾಳ ಭಾಮಿ ಜಂಕ್ಷನ್ ದಾಟಿ ನೀರು ಮುನ್ನಗಿತ್ತು. ನಾಲ್ಕು ದಿಕ್ಕುಗಳಿಂದಲೂ ನೀರು ಪೇಟೆಗೆ ನುಗ್ಗಿತ್ತು. ಎಲ್ಲಿ ನೋಡಿದರೂ, ಎತ್ತ ಸಾಗಿದರೂ ನೀರೇ ನೀರಾಗಿತ್ತು.
ಸುರಕ್ಷಿತ ಸ್ಥಳಕ್ಕೆ ತೆರಳಲು ಪರ್ಯಾಯ ವ್ಯವಸ್ಥೆ ಇಲ್ಲದೆ ಸಂತ್ರಸ್ತರೆಲ್ಲರು ಹಳೆ ಪ್ರವಾಸಿಮಂದಿರವೇ ಕಾಳಜಿ ಕೇಂದ್ರವನ್ನಾಗಿ ಆಶ್ರಯಿಸಬೇಕಾಯಿತು. ಅಲ್ಲಿಗೂ ನೀರು ನುಗ್ಗುವ ಅಪಾಯ ಉಂಟಾಗಿತ್ತಾದರೂ ಕೊನೆ ಗಳಿಗೆಯಲ್ಲಿ ನೀರು ಇಳಿಮುಖವಾಗಿತ್ತು.ಇನ್ನೊಂದೆಡೆ ವಿದ್ಯುತ್ ಇಲ್ಲದೆ ಕತ್ತಲು ಅವರಿಸಿತ್ತು. ಪುಟ್ಟಮಕ್ಕಳಿಂದ ಹಿಡಿದು ವೃದ್ಧ್ದರವರೆಗೂ ನೂರಾರು ಮಂದಿ ಸಂತ್ರಸ್ಥರು ಈ ಪ್ರವಾಸಿಮಂದಿರದಲ್ಲಿ ವಾರಗಟ್ಟಲೇ ನಿಲ್ಲಬೇಕಾಯಿತು.
ನೇತ್ರಾವತಿಯ ಅರ್ಭಟ ಕಡಿಮೆಯಾಗಿ ಸಂಪೂರ್ಣ ಇಳಿಮುಖವಾಗುವರೆಗೂ ರಸ್ತೆಗೆ ಇಳಿಯುವಂತಿಲ್ಲ, ಸುರಕ್ಷಿತ ಸ್ಥಳಕ್ಕೆ ತೆರಳಲು ಪರ್ಯಾಯ ರಸ್ತೆಯ ವ್ಯವಸ್ಥೆಯು ಇಲ್ಲದೆ ಜನತೆ ಪರದಾಡಬೇಕಾಗಿತ್ತು.
1974 ರಲ್ಲಿನ ನೆನಪು ಮರುಕಳಿಸಿದೆ
2024 ಜು.26 ಕ್ಕೆ 1974 ರ ನೆರೆಗೆ ಪೂರ್ತಿ ಐವತ್ತು ವರ್ಷ ತುಂಬುತ್ತದೆ. ಈ ವರ್ಷ ಆ ದಿನಾಂಕಕ್ಕೆ ವಾರದ ಮೊದಲೇ ನೆರೆಯ ಭೀತಿ ಸೃಷ್ಠಿಯಾಗಿದೆ. 1974 ರಲ್ಲಿ ಬಂದ ನೆರೆಯ ಪ್ರಮಾಣದಲ್ಲಿ ಜು.19 ರಂದು ಬಾರದಿದ್ದರೂ, ಅಂದಿನ ನೆನಪು ಮರುಕಳಿಸಿದೆ. ವಿಶೇಷವೆಂದರೆ 1974 ಜು.26 ಶುಕ್ರವಾರವಾಗಿತ್ತು. ಕಾಕ ತಾಳೀಯ ಎಂಬಂತೆ 2024 ಜು.26 ಕೂಡ ಶುಕ್ರವಾರವೇ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕವಾಗಿ ವೈರಲ್ ಕೂಡ ಆಗುತ್ತಿದೆ. ಈ ಭಾವಚಿತ್ರ ಜು.19 ರಂದು ಬಂಟ್ವಾಳದ ಜಕ್ರಿಬೆಟ್ಟು ವಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣವಾದ ಸೇತುವೆ ಮತ್ತು ಕಿಂಡಿಅಣೆಕಟ್ಟುವಿನ ಎರಡು ಬದಿಯಲ್ಲೂ ನೀರು ಮೈದುಂಬಿ ಹರಿಯುವ ದೃಶ್ಯ ಮನೋಜ್ ಕೋಟ್ಯಾನ್ ಅವರ ಡ್ರೋನ್ನಲ್ಲಿ ಸೆರೆಯಾಗಿದೆ.
(1974 ರ 26/07/1974 ರಂದು ಬಂದ ಮಹಾ ನೆರೆಗೆ ಇಂದು 50 ವರ್ಷದ ಸಂದರ್ಭದಲ್ಲಿ ಸಂಗ್ರಹ ಚಿತ್ರ
ಫೋಟೋ ತೆಗೆದವರು:- ಡಾ. ನರೇಂದ್ರ ಆಚಾರ್ಯ, ಬಂಟ್ವಾಳ)