ಹೊಸದಿಗಂತ ವರದಿ ಕಲಬುರಗಿ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬುಲೆಟ್ ನಡೆಯಲ್ಲ ಬ್ಯಾಲೆಟ್ ಮಾತ್ರ ನಡೆಯುತ್ತದೆ. ಹೀಗಾಗಿ ವಿರೋಧ ಪಕ್ಷಗಳಿಗೆ ಬ್ಯಾಲೆಟ್ನಿಂದಲೇ ಬಿಜೆಪಿ ಉತ್ತರ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ನಗರದ ಕೋಟನೂರು ಮಠದ ಡಿವೈನ್ ಪ್ಯಾಲೇಸ್ನಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಪ್ರಕೋಷ್ಠಗಳ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಬ್ಯಾಲೆಟ್ ಮೂಲಕ ಉತ್ತರ ಕೊಡಬೇಕು. ಐದು ರಾಜ್ಯಗಳ ಚುನಾವಣೆಯಲ್ಲಿ ಜನರು ಬ್ಯಾಲೆಟ್ ಮೂಲಕ ನಮಗೆ ಶಕ್ತಿ ನೀಡಿದರು. ಗೋವಾ, ಉತ್ತರಾಖಾಂಡ, ಮಣಿಪುರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಕಾಂಗ್ರೆಸ್ ಪಂಜಾಬ್ನಲ್ಲಿ ಆಡಳಿತ ವಿರೋದಿ ಅಲೆಗೆ ಧೂಳಿಪಟವಾಗಿ ಹೋಯಿತು.
ರಾಜ್ಯದಲ್ಲಿಯೂ ಮೋದಿ ಅಲೆಯಿದೆ. ಜತಗೆ ಆಡಳಿತ ಪರ ಅಲೆಯಿದೆ. ಹೀಗಾಗಿ ಇಲ್ಲಿಯೂ ಸಹ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಗುಡಿಸಿ ಹಾಕಬೇಕು. ಕಲಬುರಗಿ ಜಿಲ್ಲೆಯಲ್ಲಿ ೯ ಸ್ಥಾನಗಳಲ್ಲಿ ೯ ಸ್ಥಾನವನ್ನು ಬಿಜೆಪಿ ಗೆದ್ದು ಬರಲು ಶ್ರಮಿಸಿರಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಭಯೋತ್ಪಾದಕರಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಬುದ್ಧಿ ಕಲಿಸುವ ಕಾಲವಿದೆ ಎಂದ ಅವರು, ದೇಶವನ್ನು ದುರ್ಬಲಗೊಳಿಸಲು ಅನೇಕರು ಸಂಚು ರೂಪಿಸುತ್ತಿದ್ದಾರೆ. ಅಸಹಿಷ್ಣುತೆ ಪ್ರಯೋಗ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಅದೇ ರೀತಿ ಎನ್ಸಿಪಿ, ಆರ್ಜೆಡಿ, ಸಮಾಜವಾದಿ ಹಾಗೂ ಜೆಡಿಎಸ್ನಲ್ಲೂ ಪ್ರಜಾಪ್ರಭುತ್ವವಿಲ್ಲ. ಆದರೆ, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ ಎಂದು ಹೇಳಿದರು.