ಹೊಸದಿಗಂತ ವರದಿ, ಬೆಳಗಾವಿ:
ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ದರ್ಶನಕ್ಕೆ ತೆರಳಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಪ್ರಭು ಚವ್ಹಾಣ ಅವರಿಗೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ಬುಧವಾರ ನಡೆದಿದೆ.
ಮಹಾರಾಷ್ಟ್ರದ ಕೋಲ್ಲಾಪುರ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಮಹಾಲಕ್ಷ್ಮೀ (ಅಂಬಾಬಾಯಿ) ದೇವಸ್ಥಾನಕ್ಕೆ ಮಾಜಿ ಸಚಿವ ಪ್ರಭು ಚೌವ್ಹಾಣ್ ಸೇರಿದಂತೆ ಬಿಜೆಪಿ ಶಾಸಕರು ತೆರಳಿದ್ದರು. ಈ ವೇಳೆ ಉದ್ಧವ ಠಾಕ್ರೆ ಶಿವಸೇನೆಯ ಕಾರ್ಯಕರ್ತರು ಅವರನ್ನು ತಡೆಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಡಿ.೯ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ ಮಹಾಮೇಳಾವದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಮಹಾರಾಷ್ಟ್ರದ ನಾಯಕರನ್ನು ಕರ್ನಾಟಕದಲ್ಲಿ ತಡೆಹಿಡಿಯಲಾಗಿತ್ತು. ಈಗ ನೀವೇಕೆ ಇಲ್ಲಿಗೆ ಆಗಮಿಸಿದ್ದೀರಿ ಎಂದು ವಾಗ್ವಾದ ನಡೆಸಿದರು.
ಈ ಕುರಿತು ಮಾಹಿತಿ ನೀಡಿರುವ ಶಾಸಕ ಪ್ರಭು ಚವ್ಹಾಣ, ಶಿವಸೇನೆ ಕಾರ್ಯಕರ್ತರು ನಮಗೇನು ತಡೆಯೊಡ್ಡಿಲ್ಲ. ಆದರೆ, ಗಡಿ ಭಾಗದಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ಕರ್ನಾಟಕ ಸರ್ಕಾರ ತೋರುತ್ತಿರುವ ವರ್ತನೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.