ಹೊಸದಿಗಂತ ವರದಿ,ಸೋಮವಾರಪೇಟೆ:
ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಹಾನಿಯಾಗಿದೆ.
ಕೆಲ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದು ಹಸಿಮೆಣಸಿನ ಗಿಡಗಳು ಮುರಿದು ಹಾನಿಯಾಗಿದೆ. ಕುಂದಳ್ಳಿ ಗ್ರಾಮದಲ್ಲಿ ಸುಮಾರು 25 ಕೆ.ಜಿ.ತೂಕದ ಆಲಿಕಲ್ಲು ಬಿದ್ದಿದ್ದು, ಬೆಳಗ್ಗೆ ತನಕ ಕರಗದೆ ಗ್ರಾಮಸ್ಥರಲ್ಲಿ ಆಚ್ಚರಿ ಮೂಡಿಸಿದೆ.
ಗ್ರಾಮದ ಮಂಜುಳಾ ಮತ್ತು ದೃತನ್ ಬೆಳಗ್ಗೆ ಗದ್ದೆಗೆ ತೆರಳುವಾಗ ಕಟ್ಟೆ ಮರದ ಸಮೀಪ ಬೃಹತ್ ಗಾತ್ರದ ಆಲಿಕಲ್ಲು ಗೋಚರಿಸಿದೆ.
ಅನೇಕ ಕಡೆ ಕಾಫಿ ತೋಟದೊಳಗೆ ಮರಗಳು ನೆಲಕ್ಕುರುಳಿ ಹಾನಿಯಾಗಿದೆ. ಹೊನವಳ್ಳಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಗೆ ಮರವೊಂದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ಸ್ಥಳೀಯರು ಮರವನ್ನು ಕಡಿದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಳೆ ಸುರಿದಿರುವುದು ಕಾಫಿ ತೋಟಕ್ಕೆ ಉಪಯೋಗವಾಗಿದ್ದರೂ, ಹಸಿಮೆಣಸಿನ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕಿಬ್ಬೆಟ್ಟ ಗ್ರಾಮದ ಮುದ್ದ ಎಂಬವರ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಗೋಡೆ ಬಿರುಕು ಬಿಟ್ಟಿದೆ.