ಹೊಸದಿಗಂತ ವರದಿ, ರಾಯಚೂರು
ಬಿಸಿಲಿನ ತಾಪವನ್ನು ತಾಳಲಾರದೇ ಕೂಲಿ ಕಾರ್ಮಿಕನೋರ್ವ ಮೃತ ಪಟ್ಟಿರುವ ಘಟನೆ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಜರುಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಹನುಮಂತು (೪೫) ಮೃತ ಕಾರ್ಮಿಕ. ಕೂಲಿ ಕೆಲಸ ಮುಗಿಸಿಕೊಂಡು ಗುರುವಾರ ಮನೆಗೆ ಬಂದವನು ನೀರು ಕುಡಿದಿದ್ದರೆ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೀಟ್ ವೇವ್ಗೆ ಐದು ಜನ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಸದ್ದು ಮಾಡಿತ್ತು. ಆದರೆ ಈ ಐವರು ವಿವಿಧ ಕಾರಣಗಳಿಂದ ಮೃತ ಪಟ್ಟಿದ್ದಾರೆ ಎಂದು ಡಿಹೆಚ್ಓ ತಿಳಿಸಿದ್ದಾರೆ.
ಸಿಂಧನೂರ ತಾಲೂಕಿನ ಹುಡಾ ಗ್ರಾಮದ ವಿಕಲಚೇತನ ೧೫ ವರ್ಷದ ಪ್ರದೀಪ ಪೂಜಾರ ಎನ್ನುವ ಮಗುವಿನ ಆರೋಗ್ಯ ಸರಿ ಇರಲಿಲ್ಲ ಹೀಗಾಗಿ ಅವರು ಮೃತಪಟ್ಟಿದ್ದಾರೆ. ೬೦ ವರ್ಷದ ದುರ್ಗಮ್ಮ ಎನ್ನುವವರಿಗೆ ಕ್ಯಾನ್ಸರ್ ಇದ್ದ ಕಾರಣಕ್ಕೆ ಮೃತ ಪಟ್ಟಿದ್ದಾರೆ. ೬೦ ವರ್ಷದ ಗಂಗಮ್ಮ ದೇವದಾಸಿ ಎನ್ನುವ ಮಹಿಳೆ ಬೇರೆ ಊರಲ್ಲಿರುವ ಮಗಳ ಮನೆಗೆ ಹೋದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ವಿರೇಶ ತಂದೆ ಹನುಮಂತಪ್ಪ ಮಡಿವಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ತಾಪದಿಂದ ಹುಡಾ ಗ್ರಾಮದವರಾರೂ ಮೃತಪಟ್ಟಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.