ಹೊಸದಿಗಂತ ವರದಿ, ಕಲಬುರಗಿ:
ಹಿಜಾಬ್ ಮತ್ತು ಕೇಸರಿ ನಡುವಿನ ಕಿಚ್ಚು ದಿನೇದಿನೇ ಕಾವೆರುತ್ತಿದ್ದು, ಇದೀಗ ಕಲಬುರಗಿ ಜಿಲ್ಲೆಗೂ ಕಾಲಿಟ್ಟಿದೆ. ಹಿಜಾಬ್ ವಿರೋಧಿಸಿ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳು ಬಂದಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ.
ಜೇವರ್ಗಿ ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಶ್ರೀರಾಮ ಸೇನೆ ಬೆಂಬಲಿತ ವಿದ್ಯಾರ್ಥಿಗಳು ಬಂದಿದ್ದಾರೆ.
ಕಾಲೇಜಿನ ಉಪನ್ಯಾಸಕರು ಕೇಸರಿ ಶಾಲು ಹಾಕಿಕೊಂಡು ಬಂದಂತಹ ವಿದ್ಯಾರ್ಥಿಗಳನ್ನು ತಡೆದಿದಾರೆ.
ಈ ನಡುವೆ ಕಾಲೇಜು ಉಪನ್ಯಾಸಕ ಕರಿಗೂಳೇಶ್ವರ ಮತ್ತು ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಹಿಜಾಬ್ ಧರಿಸಿದವರನ್ನು ಕಾಲೇಜಿಗೆ ಬರಲು ಅನುಮತಿ ನೀಡಿದ್ದೀರಿ, ನಮಗೂ ಕಾಲೇಜಿಗೆ ಬರುವುದಕ್ಕೆ ಅವಕಾಶ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.
ಅದೇ ರೀತಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಹ ಇದೇ ಘಟನೆ ನಡೆದಿದೆ.