ಹೊಸದಿಗಂತ ವರದಿ,ಮಂಡ್ಯ:
ತಾಲೂಕಿನ ಮಲ್ಲನಾಯ್ಕನಕಟ್ಟೆ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ರೈತ ಮಂಗಳವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಮಹದೇವ (52) ಆತ್ಮಹತ್ಯೆಗೆ ಶರಣಾದ ರೈತ. ಇವರು ಸಾಲ ಮಾಡಿ ತನ್ನ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ಬೆಳೆ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಕೃಷಿ ಸಾಲ ತೀರಿಸಲು ಆಟೋ ಓಡಿಸುತ್ತಿದ್ದರು. ಇದಕ್ಕೂ ಸಾಲ ಮಾಡಿಕೊಂಡಿದ್ದಾರೆನ್ನಲಾಗಿದೆ. ಕೃಷಿ ಹಾಗೂ ಆಟೋ ಖರೀದಿಗೆಂದು ಸುಮಾರು 4 ಲಕ್ಷ ರೂ ಸಾಲ ಮಾಡಿದ್ದಾರೆಂದು ಹೇಳಲಾಗಿದೆ.
ಆದರೆ ಸಾಲ ತೀರಿಸಲು ಸಾಧ್ಯವಾಗದೇ ಮನನೊಂದು ಆಟೋದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಶಿವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.