ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನಾಮಧೇಯ ಹೋರಾಟಗಾರರಿಗೆ ಈ ದಿನವನ್ನು ಅರ್ಪಿಸುತ್ತೇನೆ-ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಬಳಿಕ ರಾಜ್ಯದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ ಶಾಂತಿಯ, ಸಹಬಾಳ್ವೆಯ, ಸಮಾನತೆಯ, ಸಮೃದ್ಧಿಯ, ಏಕತೆಯ ಕರ್ನಾಟಕದಿಂದ ನವ ಭಾರತವನ್ನು ನಿರ್ಮಿಸಲು ಶ್ರಮಿಸೋಣ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಈ ಸ್ವಾತಂತ್ರ್ಯ ದಿನವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನಗೈದ ಹಲವಾರು ಅನಾಮಧೇಯ ಹೋರಾಟಗಾರರಿಗೆ ಈ ದಿನವನ್ನು ಅರ್ಪಿಸುತ್ತೇನೆ. 1857ರಲ್ಲಿ ನಡೆದ ಘಟನೆಯನ್ನು ನಾವು ಪ್ರಥಮ ಸ್ವಾತಂತ್ರ್ಯ ದಂಗೆ ಎಂದು ಕರೆಯುತ್ತೇವೆ. ಆದರೇ ಅದಕ್ಕೂ ಮುಂಚೆ 1824ರಲ್ಲಿಯೇ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ, ಅವರ ಬಂಟ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ಮೊದಲಿಗರಾಗಿದ್ದರು ಎಂದು ಸ್ಮರಿಸಿದರು.

ಈ ದೇಶವನ್ನು ಕಟ್ಟಲು ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ತನಕ ಎಲ್ಲರೂ ತಮ್ಮ ತಮ್ಮ ಕೊಡುಗೆ ನೀಡಿ, ದೇಶವನ್ನು ಕಟ್ಟಿದ್ದಾರೆ. ಈ ದೇಶವನ್ನು ಕಟ್ಟಲು ನಮ್ಮ ಸುದೈವವೆಂಬಂತೆ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ದೊರೆತಿದೆ. ಎಂಟು ವರ್ಷಗಳಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದರೂ, ದೇಶ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಾ, ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆ ಎಂದರು.

ಕರ್ನಾಟಕ ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯವಾಗಿದೆ. ಎಲ್ಲ ತರಹದ ಸಂಪನ್ಮೂಲಗಳು ಹೇರಳವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಆಗಿದೆ. ದೇಶದ ಜಿ.ಡಿ.ಪಿ ಯಲ್ಲಿ ಶೇ.9ರಷ್ಟು ಕೊಡುಗೆ ನಮ್ಮದಾಗಿದೆ. ದೇಶದ ಸ್ವಾವಲಂಬನೆಗೆ ರೈತರ ಕೊಡುಗೆ ದೊಡ್ಡದು. ವಿಜ್ಞಾನಿಗಳು, ರೈತರು, ಕೂಲಿಕಾರ್ಮಿಕರಿಗೆ ನಮನಗಳನ್ನು ಅರ್ಪಿಸಿದರು. ಜೊತೆಗೆ ದೇಶಕ್ಕಾಗಿ ಗಡಿಯಲ್ಲಿ ಚಳಿ, ಮಳೆ, ಗಾಳಿಗೆ ಜಗ್ಗದೆ ಕಾಯುತ್ತಿರುವ ಯೋಧರ ಕರ್ತವ್ಯ ತತ್ಪರತೆಯನ್ನು ಸ್ಮರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!