ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಸಿದೆಯೇ ಹೊರತು ಕೆಂಪು ಪಟ್ಟಿ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ-2025 ‘ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ರಾಜನಾಥ್ ಸಿಂಗ್, ಭಾರತವು ಸ್ಥಿರ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ನಿರ್ಣಾಯಕ ಅನಿಶ್ಚಿತತೆಯ ನೀತಿಯ ಸಮಸ್ಯೆಯನ್ನು ಪರಿಹರಿಸಿದೆ ಎಂದರು.
ಇಂದು ಸುಸ್ಥಿರ ಆರ್ಥಿಕ ಅಭಿವೃದ್ಧಿಯು ಖಾಸಗಿ ವಲಯ ನಾಯಕತ್ವದೊಂದಿಗೆ ನಡೆಯಬೇಕು ಎಂಬುದನ್ನು ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಭಾರತದಲ್ಲಿನ ಎಲ್ಲಾ ಆಡಳಿತ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಹೂಡಿಕೆದಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರು. ಕೆಂಪು ಪಟ್ಟಿ ಅತಿದೊಡ್ಡ ಅಡಚಣೆಯಾಗಿತ್ತು. ಆದರೆ ಇದೀಗ ಕಾಲ ಬದಲಾಗಿದೆ ಎಂದರು.
ಇನ್ನು ಮುಂದೆ ಭಾರತವು ಹೂಡಿಕೆದಾರರಿಗೆ ಕೆಂಪು ಪಟ್ಟಿ ನೀಡಲ್ಲ. ಬದಲಿಗೆ ಕೆಂಪು ರತ್ನಗಂಬಳಿ ಹಾಸುತ್ತೇವೆ. ಹೂಡಿಕೆಯನ್ನು ಉತ್ತೇಜಿಸುವಲ್ಲಿ ಈ ರೀತಿಯ ಒಮ್ಮತವು ಹೂಡಿಕೆದಾರರಿಗೆ ಅನಿಶ್ಚಿತತೆಯನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕ ಪರಿಸರ ಇದೆ ಎಂದು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಉದ್ಯಮಿಗಳಿಗೆ ಹೇಳಿದರು.