ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಇಂಡೋನೇಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತವು ವಿಸ್ತರಣಾವಾದದ ಮಾರ್ಗವಲ್ಲ, ಅಭಿವೃದ್ಧಿಯ ಮಾರ್ಗವನ್ನು ಅನುಸರಿಸುವ ರಾಷ್ಟ್ರ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಮುಕ್ತ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಇಂಡೋ-ಪೆಸಿಫಿಕ್ನಲ್ಲಿ ಶಾಂತಿಗೆ ಒತ್ತು
ಭಾರತ ಮತ್ತು ಇಂಡೋನೇಷ್ಯಾ ನಡುವೆ ಸಮುದ್ರವು ಅಂತರವಲ್ಲ, ಬದಲಾಗಿ ಎರಡೂ ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ ಎಂದು ಮೋದಿ ಹೇಳಿದರು. ಸಮುದ್ರ ಮಾರ್ಗದ ಸ್ವಾತಂತ್ರ್ಯ, ಶಾಂತಿ ಮತ್ತು ಪರಸ್ಪರ ಸಹಕಾರಕ್ಕೆ ಭಾರತ ಬದ್ಧವಾಗಿದೆ ಎಂದರು.
ಇದನ್ನೂ ಓದಿ:
ರಕ್ಷಣೆ, ತಂತ್ರಜ್ಞಾನ ಸೇರಿ ಹಲವು ಒಪ್ಪಂದಗಳು
ಇದಕ್ಕೂ ಮುನ್ನ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣೆ, ಕಡಲ ಭದ್ರತೆ, ತಂತ್ರಜ್ಞಾನ, ಆಹಾರ ಭದ್ರತೆ, ಔಷಧ, ಖನಿಜ ಸಂಪನ್ಮೂಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಮಾರು 12 ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
ಯುಎನ್ ಸುಧಾರಣೆ, ಭಯೋತ್ಪಾದನೆ ವಿರುದ್ಧ ಸಹಕಾರ
ಜಾಗತಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮೋದಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಇನ್ನಷ್ಟು ವಿಳಂಬವಾಗಬಾರದು ಎಂದು ಪ್ರತಿಪಾದಿಸಿದರು. ಜೊತೆಗೆ ಸೈಬರ್ ಅಪರಾಧ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮತ್ತು ಉಗ್ರವಾದದ ವಿರುದ್ಧ ಭಾರತ-ಇಂಡೋನೇಷ್ಯಾ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು. ಭಾರತ ಮತ್ತು ಇಂಡೋನೇಷ್ಯಾದ ಒಗ್ಗಟ್ಟು ಜಾಗತಿಕ ಶಾಂತಿ, ಪ್ರಜಾಪ್ರಭುತ್ವ ಮತ್ತು ಸಮೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.



