ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರದ ದೂರುಗಳ ಹಿನ್ನೆಲೆಯಲ್ಲಿ, ಜಾರ್ಖಂಡ್ ಸರ್ಕಾರವು ಬರೋಬ್ಬರಿ 45 ಪ್ರಮುಖ ನೇಮಕಾತಿ ಪರೀಕ್ಷೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ವಿದ್ಯಾರ್ಥಿ ಸಮುದಾಯದ ತೀವ್ರ ಪ್ರತಿಭಟನೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರವು, 39 ಪರೀಕ್ಷೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದು, ಇತರ 6 ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿದೆ.

ಉನ್ನತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರದ್ದು
ಜಾರ್ಖಂಡ್ ಲೋಕಸೇವಾ ಆಯೋಗ ಮತ್ತು ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ ಮೂಲಕ ನಡೆಸಿದ್ದ ಡೆಪ್ಯೂಟಿ ಕಲೆಕ್ಟರ್, ಸಿವಿಲ್ ಜಡ್ಜ್, ಅಸಿಸ್ಟೆಂಟ್ ಪ್ರೊಫೆಸರ್, ಡ್ರಗ್ ಇನ್ಸ್ಪೆಕ್ಟರ್, ದಂತ ವೈದ್ಯರು, ಸಹಾಯಕ ಎಂಜಿನಿಯರ್, ಫಾರೆಸ್ಟ್ ರೇಂಜ್ ಆಫೀಸರ್ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.
ಹೊರಗುತ್ತಿಗೆ ಸಂಸ್ಥೆಯ ಪರೀಕ್ಷಾ ಫಲಿತಾಂಶಗಳು ವಜಾ
2014 ರಿಂದ ಪರೀಕ್ಷೆಗಳನ್ನು ನಡೆಸುತ್ತಿದ್ದ ‘ಟಿಎಸ್ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್’ ಎಂಬ ಹೊರಗುತ್ತಿಗೆ ಸಂಸ್ಥೆ ನಡೆಸಿದ ಎಲ್ಲಾ ಪರೀಕ್ಷೆಗಳು ಹಾಗೂ ಪ್ರಕಟಿಸಿದ ಫಲಿತಾಂಶಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದರೊಂದಿಗೆ, ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸಂಯೋಜಿತ ಪದವಿ ಹಂತದ ಪರೀಕ್ಷೆಯನ್ನು ಸರ್ಕಾರ ಈಗಾಗಲೇ ರದ್ದುಪಡಿಸಿದೆ.

ತ್ವರಿತ ವಿಚಾರಣೆ ಹಾಗೂ ಸುಧಾರಣಾ ಕ್ರಮಗಳು
ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ತ್ವರಿತ ವಿಚಾರಣೆ ನಡೆಸಲು ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸುವಂತೆ ಹೈಕೋರ್ಟ್ಗೆ ಕೋರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ, JPSC ಮತ್ತು JSSC ಆಯೋಗಗಳ ಒಳಗೆ ಅಕ್ರಮಗಳನ್ನು ತಡೆಯಲು ಆಂತರಿಕ ಮೇಲ್ವಿಚಾರಣಾ (ವಿಜಿಲೆನ್ಸ್) ಕೋಶ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಹಿರಿಯ IAS ಅಧಿಕಾರಿ ಅಮಿತಾಭ್ ಕೌಶಲ್ ಅವರ ನೇತೃತ್ವದಲ್ಲಿ ಸುಧಾರಣಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು 2 ತಿಂಗಳಲ್ಲಿ ಸಮಗ್ರ ವರದಿ ನೀಡಲಿದೆ.



