ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸಿ ಬಿಗ್ ಹೊಡೆತ ನೀಡಿದ ಭಾರತ ,ಇದೀಗ ಜಲ ದಾಳಿ ತೀವ್ರಗೊಳಿಸಿದ್ದು, ರಿಯಾಸಿಯ ಸಲಾಲ್ ಅಣೆಕಟ್ಟಿನ ಮೂರು ದ್ವಾರಗಳನ್ನು ತೆರೆದಿದೆ. ಈ ಮೂಲಕ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯನ್ನು ಭಾರತ ಹೆಚ್ಚಿಸಿದೆ.
ಭಾರೀ ಮಳೆಯಿಂದಾಗಿ ರಾಂಬನ್ನ ಬಗ್ಲಿಹಾರ್ ಅಣೆಕಟ್ಟಿನ ದ್ವಾರವನ್ನೂ ಭಾರತ ತೆರೆದಿದೆ. ಸಿಂಧೂ ನದಿ ನೀರು ಒಪ್ಪಂದ ರದ್ದಾದ ಬಳಿಕ, ಎಷ್ಟು ನೀರನ್ನು ಬಿಡುಗಡೆ ಮಾಡಬೇಕೆಂಬ ನಿರ್ಧಾರವನ್ನು ಭಾರತ ತನ್ನ ಸ್ವಂತ ಇಚ್ಛೆಗೆ ಬಿಟ್ಟಿದೆ.
ಮೊದಲು ಚೆನಾಬ್ ನದಿಯ ನೀರನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿತ್ತು, ಆದರೆ ಈಗ ದ್ವಾರಗಳನ್ನು ತೆರೆಯುವ ಮೂಲಕ ನೀರು ಪಾಕಿಸ್ತಾನಕ್ಕೆ ತಲುಪಲಿದೆ. ಇದರಿಂದ ಪಾಕಿಸ್ತಾನದ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿ ಪ್ರವಾಹ ಪರಿಸ್ಥಿತಿ ತಲೆದೋರಲಿದೆ.
ಇದೀಗ ಭಾರತದ ಈ ನಡೆಯಿಂದ ಪಾಕಿಸ್ತಾನದ ಜನತೆಯಲ್ಲಿ ಗೊಂದಲ ಮತ್ತು ಆತಂಕ ಮೂಡಿದೆ. ಒಂದೆಡೆ ನೀರಿನ ಕೊರತೆಯಿಂದ ಕೃಷಿ ವಲಯಕ್ಕೆ ತೊಂದರೆಯಾಗಿತ್ತು, ಈಗ ಪ್ರವಾಹದ ಭೀತಿಯಿಂದ ಜನ ತಲ್ಲಣಗೊಂಡಿದ್ದಾರೆ.
ಒಟ್ಟಿನಲ್ಲಿ ಜಲ, ಭೂಮಿ, ಮತ್ತು ಆಕಾಶದ ಮೂರು ಕಡೆಗಳಿಂದಲೂ ಪಾಕಿಸ್ತಾನದ ಮೇಲೆ ಭಾರತ ಒತ್ತಡ ಹೇರಿದೆ.