ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀಕಾರವಾಗಿ ಭಾರತ ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದೆ. ಇದರಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ಇದರ ಬೆನ್ನಲ್ಲೇ, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹಾಗಾಗಿ ದೇಶದ ಡ್ಯಾಂಗಳಲ್ಲಿ ಭದ್ರತೆಗೆ ಸೂಚನೆ ಬೆನ್ನಲ್ಲೇ ಇತ್ತ ಕರ್ನಾಟದ ಡ್ಯಾಂಗಳಲ್ಲಿ ಬಿಗಿ ಭದ್ರತೆ ಸೂಚಿಸಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ ಭದ್ರತೆ ಬಿರುಸುಗೊಂಡಿದೆ. ಈಗಾಗಲೇ ಭದ್ರತೆಯ ನೇತೃತ್ವ ವಹಿಸಿಕೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಿಕೊಂಡಿದೆ.
ಆಲಮಟ್ಟಿ ಡ್ಯಾಂ ಪ್ರವೇಶ ದ್ವಾರದಿಂದಲೇ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುವುದು. ಬಾರೀ ಹಾಗೂ ಗೂಡ್ಸ್ ವಾಹನಗಳಿಗೆ ನಿಷೇಧಿಸಲಾಗಿದೆ, ಓರ್ವ ಡಿವೈಎಸ್ಪಿ ನೇತೃತ್ವದಲ್ಲಿ ಒಟ್ಟು 86 ಕೆಎಸ್ಐಎಸ್ಎಫ್ ಅಧಿಕಾರಿಗಳಿಂದ ಆಧುನಿಕ ಶಸ್ತ್ರಾಸ್ತ್ರಗಳ ಸಹಿತ ಭದ್ರತೆ ಒದಗಿಸಲಾಗಿದೆ. ನಿತ್ಯ 24 ಗಂಟೆಗಳ ಕಾಲ ಮೂರು ಪಾಳಯದಲ್ಲಿ ಭದ್ರತೆ ಇರಲಿದೆ. ಬೋಟ್ ಮೂಲಕ ಡ್ಯಾಂ ಹಿನ್ನೀರಿನಲ್ಲೂ ತಪಾಸಣೆ ಕಟ್ಟೆಚ್ಚರ ವಹಿಸಲಾಗಿದೆ.
ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಮೇಲೆ ತೀವ್ರ ನಿಗಾ ಇಡಲು ಭದ್ರತಾ ಪಡೆಗೆ ಭದ್ರತಾ ಇಲಾಖೆ ವಿಶೇಷ ಸೂಚನೆ ನೀಡಿದೆ. ಹೇಮಾವತಿ ಜಲಾಯಶದಲ್ಲಿ ಕೈಗಾರಿಕಾ ಭದ್ರತಾ ಪಡೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಓರ್ವ ಪಿಐ, ಓರ್ವ ಪಿಎಸ್ಐ, ನಾಲ್ವರು ಎಎಸ್ಐ ಸೇರಿ 22 ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಏರ್ಸ್ಟ್ರೈಕ್, ದ್ರೋಣ್ ಅಟ್ಯಾಕ್ ಆಗವ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ನಿಗಾವಹಿಸಲು ಸೂಚಿಸಿದ್ದು, ದಾಳಿಯಾದ ವೇಳೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಂದ (ಡೆಮೋ) ಐಎಸ್ಡಿ ಡಿಜಿ ಮಾಹಿತಿ ಪಡೆದುಕೊಂಡಿದ್ದಾರೆ.