ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧಪೀಡಿತ ಉಕ್ರೇನ್ ಗೆ ಮಾನವೀಯ ನೆಲೆಯಲ್ಲಿ ಭಾರತ ಸಹಾಯಹಸ್ತ ಚಾಚುತ್ತಿದೆ. ಉಕ್ರೇನ್ ಜನರಿಗೆ ಅಗತ್ಯವಿರುವ ಪರಿಹಾರ ಸಾಮಗ್ರಿಗಳನ್ನು ಹೊತ್ತು ಭಾರತೀಯ ವಾಯುಪಡೆಯ C-17 ಗ್ಲೋಬ್ಮಾಸ್ಟರ್ ವಿಮಾನವು ಬುಧವಾರ ಮುಂಜಾನೆ ರೊಮೇನಿಯಾಗೆ ತೆರಳಿದೆ. ರಷ್ಯಾದ ಭೀಕರ ಆಕ್ರಮಣದಿಂದ ಕಂಗೆಟ್ಟು ಸುತ್ತಮುತ್ತಲಿನ ದೇಶಗಳ ಗಡಿ ಪ್ರದೇಶಗಳತ್ತ ಓಡಿಬರುತ್ತಿರುವ ಉಕ್ರೇನಿಯನ್ನರಿಗೆ ನೆರವಾಗುವ ಉದ್ದೇಶದಿಂದ ಭಾರತವು ಪರಿಹಾರ ಸಾಮಗ್ರಿಗಳನ್ನು ರವಾನಿಸುತ್ತಿದೆ. ಇದೇವೇಳೆ ಯುದ್ಧರಂಗ ಉಕ್ರೇನ್ ನೆಲದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನ್ ಗಡಿದಾಟಿ ರೊಮೇನಿಯಾದತ್ತ ಆಗಮಿಸುವಂತೆ ಸೂಚನೆ ನೀಡಲಾಗಿದ್ದು, ಈ ವಿಮಾನವು ಮರಳಿ ಬರುವಾಗ ವಿದ್ಯಾರ್ಥಿಗಳನ್ನು ಕರೆತರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತವು ಮಂಗಳವಾರ ಪೋಲೆಂಡ್ ಮೂಲಕ ಉಕ್ರೇನ್ಗೆ ಔಷಧಿಗಳು ಮತ್ತುಇತರ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವಿನ ಮೊದಲ ಭಾಗವನ್ನು ಕಳುಹಿಸಿತ್ತು.