ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕವೂ ಭಾರತೀಯ ಪ್ರಜೆಯನ್ನು ಸ್ವದೇಶಕ್ಕೆ ಕಳುಹಿಸಲು ವಿಳಂಬ ಧೋರಣೆ ತಾಳಿದ ಪಾಕಿಸ್ಥಾನ ಆಡಳಿತವನ್ನು ನ್ಯಾಯಾಲಯ ತರಾಟೆಗೆತ್ತಿಕೊಂಡಿದೆ.
ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ಸಿಂಧ್ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮಹಮ್ಮದ್ ಕರೀಮ್ ಖಾನ್ ಅಘಾ, ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಆಡಳಿತಕ್ಕೆ ಸೂಚಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಏನಿದು ಘಟನೆ?
2013ರಲ್ಲಿ ಮೊಬಿನ್ ನಗರ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಮುಘ್ನಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದಾಗಿ ಬಂಧಿತರಾಗಿದ್ದ ಅವರಿಗೆ 2017ರಲ್ಲಿ ಸೆಷನ್ಸ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿದ್ದ ಮುಘ್ನಿ, ಸಿಂಧ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭ ಮುಘ್ನಿ ಭಾರತೀಯ ಎಂಬುದು ಬೆಳಕಿಗೆ ಬಂದಿತ್ತಾದರೂ, ಆರೋಪಿಯ ಪೌರತ್ವವನ್ನು ಪತ್ತೆ ಹಚ್ಚುವಲ್ಲಿ ಆಡಳಿತ ವಿಫಲವಾಗಿತ್ತು. ಇದೀಗ ಶಿಕ್ಷೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಘ್ನಿಯನ್ನು ಭಾರತಕ್ಕೆ ಕಳುಹಿಸಲು ಸಿದ್ದತೆ ನಡೆಸುವಂತೆ ನ್ಯಾಯಾಲಯವು ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಆದರೆ ಅದಾದ ಬಳಿಕವೂ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಸಚಿವಾಲಯದ ಕಾರ್ಯವೈಖರಿಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.