ಹೊಸದಿಗಂತ ಡಿಜಿಟಲ್ ಡೆಸ್ಕ್:
ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧ ಕೃತ್ಯವೆಂದು ಪರಿಗಣಿಸಲು ಭಾರತ ನಿರ್ಧರಿಸಿದೆ.
ಕಳೆದ 2 ದಿನಗಳಿಂದ ಪಾಕಿಸ್ತಾನ ಭಾರತದ ಮೇಲೆ ಡ್ರೋನ್ ಮತ್ತು ಶೆಲ್ ದಆಳಿ ನಡೆಸುತ್ತಿದೆ. ಆದ್ರೆ ಪಾಕ್ ಪ್ರಯತ್ನಗಳನ್ನೆಲ್ಲ ಭಾರತೀಯ ಸೇನೆ ವಿಫಲಗೊಳಿಸುತ್ತಿದೆ. ಇದೀಗ ಭಾರತ ಭವಿಷ್ಯದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳನ್ನು ಯುದ್ಧ ಕೃತ್ಯಗಳೆಂದು ಪರಿಗಣಿಸಲಾಗುವುದು ಎಂದು ಘೋಷಿಸಿದೆ.
ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ದೇಶದ ವಿರುದ್ಧದ ಯುದ್ಧ ಕೃತ್ಯವೆಂದು ಪರಿಗಣಿಸಲಾಗುವುದು ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲಾಗುವುದು ಎಂದು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಎರಡು ದಿನಗಳ ಕಾಲ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಪ್ರಯತ್ನಿಸಿದ ನಂತರ ಭಾರತ ಸರ್ಕಾರ ಈ ಹೇಳಿಕೆ ನೀಡಿದೆ.
ಭಾರತದ ಪಶ್ವಿಮದ ಗಡಿಯಲ್ಲಿ ಪಾಕಿಸ್ತಾನ, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳನ್ನು ಬಳಸಿಕೊಂಡು ಆತಂಕದ ವಾತಾವರಣ ಸೃಷ್ಟಿಸಲು ಮುಂದಾಗಿತ್ತು. ಪಾಕಿಸ್ತಾನದ ಈ ಪ್ರಯತ್ನವನ್ನ ಸಂಪೂರ್ಣವಾಗಿ ವಿಫಲಗೊಳಿಸಲಾಗಿದೆ ಎಂದ ಭಾರತೀಯ ಸೇನೆ ಹೇಳಿದೆ. ಪಾಕಿಸ್ತಾನ ತನ್ನ ಸೈನಿಕರನ್ನು ಭಾರತದ ಗಡಿಯತ್ತ ಸ್ಥಳಾಂತರ ಮಾಡುತ್ತಿದ್ದು, ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಸೂಚನೆ ಎಂದು ಭಾರತೀಯ ಸೇನೆ ಹೇಳಿದೆ. ಎಲ್ಲಾ ಪ್ರಯತ್ನಗಳನ್ನು ಭಾರತ ವಿಫಲಗೊಳಿಸುತ್ತಿದ್ರೂ, ಬುದ್ಧಿ ಕಲಿಯದ ಪಾಕಿಸ್ತಾನ “ಆಕ್ರಮಣಕಾರಿ ಉದ್ದೇಶ”ದಿಂದ ಹೊರ ಬರುತ್ತಿಲ್ಲ. ಭಾರತದ ಸೇನೆ ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಸೇನೆ ತಿಳಿಸಿದೆ.