ಭಾರತದ ಗಡಿ ಸಂಪೂರ್ಣ ಸುರಕ್ಷಿತ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅದರ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

‘Times Now’ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಜನರು ಸಶಸ್ತ್ರ ಪಡೆಗಳ ಮೇಲೆ ಸಂಪೂರ್ಣ ನಂಬಿಕೆಯಿಡಬೇಕು ಎಂದು ಹೇಳಿದ್ದಾರೆ.

ಭಾರತ -ಚೀನಾ ಗಡಿ ಸಮಸ್ಯೆಯ ಕುರಿತು ವಿಪಕ್ಷದ ನಾಯಕರು ಸೇರಿದಂತೆ ಹಲವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ‘ದೇಶದ ಹಿತಾಸಕ್ತಿಗಳಿಗೆ ಅನುಗುಣವಾಗಿ, ನಾನು ಅವರಿಗೆ ಏನು ಹೇಳಲು ಸಾಧ್ಯವೋ ಅದನ್ನು ಹೇಳುತ್ತೇನೆ. ಆದರೆ ರಕ್ಷಣೆಯಲ್ಲಿ, ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ಹಲವು ವಿಷಯಗಳಿವೆ. ನಾವು ಅವುಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ’ ಎಂದರು.

5 ವರ್ಷಗಳ ಕಾಲ ರಕ್ಷಣಾ ಸಚಿವ, ಅದಕ್ಕೂ ಮೊದಲು ಗೃಹ ಸಚಿವನಾಗಿದ್ದ ನಾನು ನೋಡಿದ ಅನುಭವದ ‌‌ಆಧಾರದ ಮೇಲೆ ದೇಶದ ಜನರಿಗೆ ಭರವಸೆ ನೀಡುತ್ತೇನೆ. ಅವರು(ದೇಶದ ಜನರು) ನಮ್ಮ ಸೇನೆ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಸಂಪೂರ್ಣ ನಂಬಿಕೆಯಿಡಬೇಕು. ನಮ್ಮ ದೇಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ’ ಎಂದು ಹೇಳಿದರು.

ಅಗ್ನಿವೀರ ಯೋಜನೆಯನ್ನು ಸಮರ್ಥಿಸಿಕೊಂಡ ರಾಜನಾಥ್ ಸಿಂಗ್ , ‘ಸಶಸ್ತ್ರ ಪಡೆಗಳಲ್ಲಿ ಯುವಕರು ಇರಬೇಕು ಎಂಬ ನಿಲುವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಿರಿಯ ಯೋಧರು ಕೂಡ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ’ ಎಂದರು.

ಇಂದು ತಂತ್ರಜ್ಞಾನದ ಯುಗ. ಭಾರತೀಯ ಯುವಜನತೆಯೂ ತಂತ್ರಜ್ಞಾನದ ಅರಿವನ್ನು ಹೊಂದಿರಬೇಕು. ಅಂತಹ ಯುವಕರನ್ನು ಈ ಯೋಜನೆಯಡಿ ಅಗ್ನಿವೀರರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ.ಈ ಯೋಜನೆಯಿಂದ ಈ ಯುವಕರ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅರೆಸೇನಾ ಪಡೆಗಳಲ್ಲಿ ಅಗ್ನಿವೀರರಿಗೆ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!