ಹೊಸದಿಗಂತ ಕುಮಟಾ :
ಪ್ರೀತಿಯ ವ್ಯಾಮೋಹದಲ್ಲಿ ಸಿಲುಕಿದ ಭಗ್ನ ಪ್ರೇಮಿಯೊಬ್ಬ ಯುವಕನೋರ್ವನಿಗೆ ಕಣ್ಣಿಗೆ ಕಾರದ ಪುಡಿ ಎರಚಿ, ಕುತ್ತಿಗೆಗೆ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ಪಟ್ಟಣದ ಮಣಕಿ ಮೈದಾನದಲ್ಲಿ ಬುಧವಾರ ನಡೆದಿದ್ದು, ಘಟನೆ ಕುಮಟಾದ ಜನರನ್ನು ಬೆಚ್ಚಿ ಬೀಳಿಸಿದೆ.
ತಾಲೂಕಿನ ಹೆಗಡೆ ಚಿಟ್ಟಿಕಂಬಿ ಗ್ರಾಮದ ನಿವಾಸಿ ರಾಜೇಶ ರಮೇಶ ಅಂಬಿಗ (27) ಚಾಕು ಇರಿದು ಹಲ್ಲೆ ಮಾಡಿದ ಆರೋಪಿಯಾಗಿದ್ದು, ಕುಮಟಾ ದುಂಡಕುಳಿಯ ಸಂತೋಷ ಪಾಂಡುರಂಗ ಅಂಬಿಗ (27) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.
ಯುವತಿಯೋರ್ವಳು ಈ ಹಿಂದೆ ಪ್ರೀತಿಸುತ್ತಿದ್ದ ಪ್ರಿಯಕರನ ವರ್ತನೆ ಸರಿ ಇಲ್ಲದ ಕಾರಣ ಬೇರೊಬ್ಬ ಪ್ರಿಯಕರನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ಘಟನೆಯಿಂದಾಗಿ ಕೋಪಗೊಂಡ ಮಾಜಿ ಪ್ರಿಯಕರನೋರ್ವ ಹಾಲಿ ಪ್ರಿಯಕರನಿಗೆ ಚಾಕುವಿನಿಂದ ಇರಿದಿದ್ದಾನೆ.
ವಾಟರ್ ಸರ್ವೀಸ್ ಸ್ಟೇಶನ್ ಕೆಲಸ ಮಾಡುತ್ತಿದ್ದ ಹೆಗಡೆ ಚಿಟ್ಟಿಕಂಬಿ ನಿವಾಸಿ ರಾಜೇಶ ರಮೇಶ ಅಂಬಿಗ ಹಿಂದೆ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ರಾಜೇಶನ ವರ್ತನೆ ಸರಿ ಇಲ್ಲದೇ ಇದ್ದುದ್ದರಿಂದ ಯುವತಿಯು ತನ್ನ ಮಾವನ ಮಗನಾದ, ಆಟೋಚಾಲಕ ದುಂಡಕುಳಿಯ ಸಂತೋಷ ಪಾಂಡುರಂಗ ಅಂಬಿಗ ಈತನನ್ನು ಪ್ರೀತಿಸಿ ಇಬ್ಬರೂ ಮದುವೆಯಾಗಲು ಇಚ್ಚಿಸಿದ್ದರು ಎನ್ನಲಾಗಿದೆ.
ಇದರಿಂದಾಗಿ ಕೋಪಗೊಂಡ ರಾಜೇಶ ಕುಮಟಾದ ಮಣಕಿ ಮೈದಾನದ ಲೈಬ್ರರಿ ಹತ್ತಿರ ಸಂತೋಷ ಅಂಬಿಗ ಈತನನ್ನು ಕರೆಯಿಸಿಕೊಂಡಿದ್ದಾನೆ. ಈ ವೇಳೆ ಸಂತೋಷ ಎಂಬುವವನಿಗೆ ಅವಾಚ್ಯ ಶಬ್ದಗಳಿಂದ ಬೈದು, ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನ ಪ್ರೀತಿ ಮಾಡಿ ಮದುವೆಯಾಗಲು ಹೊರಟಿರುವೆಯಾ ಎಂದು ಹೇಳಿ ಸಂತೋಷ ಅಂಬಿಗನ ಎದೆಯ ಮೇಲೆ ಕೈಯಿಂದ ಹೊಡೆದು, ಕಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾನೆ.
ಘಟನೆಯಲ್ಲಿ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿ, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಮಟಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.