ಕೀಳುಮಟ್ಟದ ಹೇಳಿಕೆ: ಕ್ಷಮೆ ಕೋರಿದ ಯೂಟ್ಯೂಬರ್​​ ರಣವೀರ್ ಅಲ್ಲಾಬಾದಿಯಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ರಭಾವಿ ರಣವೀರ್ ಅಲ್ಲಾಬಾದಿಯಾ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ವಿವಾದಾತ್ಮಕ ಮತ್ತು ಕೀಳುಮಟ್ಟದ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ‘ಈ ರೀತಿಯ ಹೇಳಿಕೆ ನೀಡಬಾರದಿತ್ತು. ಇದು ಹಾಸ್ಯಕ್ಕೂ ಮೀರಿದ್ದು, ತಪ್ಪಾಯ್ತು’ ಎಂದು ಹೇಳಿದ್ದಾರೆ.

ಸ್ಟಾಂಡಪ್​ ಕಮಿಡಿಯನ್​ ಸಮಯ್​ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣವೀರ್ ಅಲ್ಲಾಬಾದಿಯಾ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಸ್ಪರ್ಧಿಯೊಬ್ಬರಲ್ಲಿ ಅಸಹ್ಯಕರ ಪ್ರಶ್ನೆ ಕೇಳಿದ್ದರು. ಈ ವಿಡಿಯೋ ವೈರಲ್​ ಆಗಿ, ತೀವ್ರ ಟೀಕೆಗೆ ಗುರಿಯಾಗಿದೆ.

ಇದರ ಬೆನ್ನಲ್ಲೇ, ರಣವೀರ್​​ ತಮ್ಮ ತಪ್ಪನ್ನು ಅರಿತುಕೊಂಡು ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಬೀರ್‌ಬೈಸೆಪ್ಸ್ ಯೂಟ್ಯೂಬರ್​,’ನನ್ನ ಹೇಳಿಕೆ ಉಚಿತವಾಗಿರಲಿಲ್ಲ. ಅದು ತಮಾಷೆಯೂ ಅಲ್ಲ ಎಂಬುದು ಗೊತ್ತಿದೆ. ಹಾಸ್ಯ ಮಾಡಲು ನನಗೆ ಬರುವುದಿಲ್ಲ. ನನ್ನ ಹೇಳಿಕೆಗೆ ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.

‘ವೇದಿಕೆಯನ್ನು ನೀವು ಹೀಗೆಯೇ ಬಳಸುತ್ತೀರಾ ಎಂದು ಹಲವರು ಪ್ರಶ್ನಿಸಿದ್ದೀರಿ. ಖಂಡಿತವಾಗಿಯೂ ನಾನು ಮಾಡಿದ್ದು ತಪ್ಪು. ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದು. ನಾನು ಹೇಳಿದ್ದಕ್ಕೆ ನೆವ, ಸಂದರ್ಭ, ಸಮರ್ಥನೆಯನ್ನು ನೀಡುವುದಿಲ್ಲ. ನನ್ನಿಂದಾದ ಪ್ರಮಾದಕ್ಕೆ ಕ್ಷಮೆ ಮಾತ್ರ ಕೇಳುತ್ತೇನೆ’ ಎಂದು ಹೇಳಿದ್ದಾರೆ.

‘ಪಾಡ್‌ಕ್ಯಾಸ್ಟ್ ಅನ್ನು ಎಲ್ಲಾ ವಯೋಮಾನದ ಜನರು ವೀಕ್ಷಿಸುತ್ತಾರೆ. ಕುಟುಂಬವನ್ನು ನಾನು ಅತಿಯಾಗಿ ಗೌರವಿಸುತ್ತೇನೆ. ಈ ತಪ್ಪಿನಿಂದ ನಾನು ಪಾಠ ಕಲಿತಿದ್ದೇನೆ. ಆಕ್ಷೇಪಾರ್ಹ ವಿಡಿಯೋವನ್ನು ಅಳಿಸಿ ಹಾಕಲು ಕಾರ್ಯಕ್ರಮದ ಆಯೋಜಕರಲ್ಲಿ ಕೋರಿದ್ದೇನೆ. ನನ್ನನ್ನು ಕ್ಷಮಿಸುವ ಭರವಸೆಯಲ್ಲಿದ್ದೇನೆ’ ಎಂದು ಮನವಿ ಮಾಡಿದ್ದಾರೆ.

ಕೀಳುಮಟ್ಟದ ಹೇಳಿಕೆ ವಿರುದ್ಧ ದೂರು:

ರಣವೀರ್ ಅಲ್ಲಾಬಾದಿಯಾ ವಿವಾದಿತ ಮತ್ತು ಕೀಳುಮಟ್ಟದ ಹೇಳಿಕೆಯ ವಿರುದ್ಧ ಮುಂಬೈ ಮತ್ತು ದೆಹಲಿಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ, ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಕಮಿಡಿಯನ್​ ಸಮಯ್​ ರೈನಾ, ಇನ್ನೊಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿ ಅಪೂರ್ವ ಮಖಿಜಾ ಮತ್ತು ಆಯೋಜಕರ ವಿರುದ್ಧ ದೂರು ನೀಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!