ಹೊಸದಿಗಂತ ವರದಿ ಚಿತ್ರದುರ್ಗ:
ಇನ್ನೋವಾ ಕಾರಿನ ಟೈರ್ ಸ್ಫೋಟವಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗ ನಗರದ ಹೊರವಲಯದ ಸೀಬಾರ ಬಳಿಯ ಗೋಶಾಲೆ ಮುಂದಿನ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಅರ್ಜುನ್ (28) , ಸರವಣ (30), ಶ್ರೀಧರ್ (30) ಎಂದು ಗುರುತಿಸಲಾಗಿದೆ. ಮೃತ ಅರ್ಜುನ್ ಚೆನೈನ ಅಶೋಕನಗರ ಪೋಲಿಸ್ ಠಾಣೆಯ ಪೇದೆ ಎನ್ನಲಾಗಿದೆ. ಇವರೆಲ್ಲರೂ ತಮಿಳುನಾಡಿನ ಕೃಷ್ಣಗಿರಿಯವರು ಎಂದು ತಿಳಿದುಬಂದಿದೆ. ಪ್ರವಾಸಕ್ಕೆಂದು ಗೋವಾಗೆ ತೆರಳುವಾಗ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಇತರೆ 6 ಜನರಿಗೆ ತೀವ್ರ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.