ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ನಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುಲಿಗೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ವರದಿಯಾಗಿವೆ.
ಈ ಎಲ್ಲ ಘಟನೆಗಳಿಗೆ ಸಂಚು ರೂಪಿಸಲು ಮೊಬೈಲ್ ಬಳಕೆ ಮಾಡಲಾಗಿದೆ. ಜೈಲಿನಲ್ಲಿರುವ ಖೈದಿಗಳು ಮೊಬೈಲ್ ಬಳಸುತ್ತಿರುವುದು ರಾಜ್ಯ ಗೃಹ ಸಚಿವಾಲಯಕ್ಕೆ ತಲೆನೋವಾಗಿ ಪರಿಣಮಿಸಿದೆ.
ಆದ್ದರಿಂದ, ಖೈದಿಗಳು ಸೆಲ್ ಫೋನ್ ಬಳಸುವುದನ್ನು ತಡೆಯಲು ಮೊಬೈಲ್ ನೆಟ್ವರ್ಕ್ ಜಾಮರ್ ಗಳನ್ನು ಅಳವಡಿಸಲಾಗಿದೆ. ಆದರೆ, ಇದರಿಂದ ಕಾರಾಗೃಹದ ಸುತ್ತಮುತ್ತಲಿನ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ. ಕಳೆದ 3-4 ತಿಂಗಳಿಂದ ಮೊಬೈಲ್ ನೆಟ್ವರ್ಕ್ನಲ್ಲಿ ಸಮಸ್ಯೆ ಎದುರಿಸುತ್ತಿದ್ದು. ಕಾರಾಗೃಹದ ಸುತ್ತಮುತ್ತಲಿನ ನಿವಾಸಿಗಳ ಜೀವನ ದುಸ್ತರವಾಗಿದೆ.
ನೆಟ್ವರ್ಕ್ ಸಮಸ್ಯೆಯಿಂದಾಗಿ ಯಾವುದೇ ತುರ್ತು ಸಂದರ್ಭಗಳಲ್ಲಿ ಪೊಲೀಸ್, ಫೈರ್ ಮತ್ತು ಅಂಬ್ಯುಲೆನ್ಸ್ ಸೇವೆಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಸ್, ಆಟೋ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ವರ್ಕ್ ಪ್ರಮ್ ಹೋಮ್ ಕೆಲಸ ಮಾಡಲು ಆಗುತ್ತಿಲ್ಲ. ಯಾವುದೇ ಕರೆ ಸ್ವೀಕರಿಸಲು ಜೈಲಿನಿಂದ ಸರಿಸುಮಾರು ಎರಡು ಕಿ.ಮಿ ದೂರ ಹೋಗಬೇಕಿದೆ ಎಂದು ನಿವಾಸಿಗಳು ಜೈಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.