ಹೊಸದಿಗಂತ ವರದಿ, ಅಂಕೋಲಾ:
ಅಂಕೋಲಾ ತಾಲೂಕಿನ ಮಂಜಗುಣಿ ಗಂಗಾವಳಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಅತಿ ಶೀಘ್ರದಲ್ಲಿ ಪೂರೈಸುವಂತೆ ಶಾಸಕ ಸತೀಶ ಸೈಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿತ್ತು ಇದೀಗ ಪರಿಹಾರ ಹಣ ಮಂಜೂರು ಮಾಡಲಾಗಿದೆ ತಾವು ನೀಡಿರುವ ಭರವಸೆಗಿಂತ ಕಡಿಮೆ ಪರಿಹಾರ ಹಣ ಬಂದಿದ್ದರೆ ಆ ಮೊತ್ತವನ್ನು ಸ್ವತಃ ಭರಿಸುವುದಾಗಿ ತಿಳಿಸಿದ ಶಾಸಕ ಸತೀಶ ಸೈಲ್ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದಾಗಲೂ ಸಹ ಪ್ರವೇಶದ್ವಾರದಲ್ಲಿ ಜೆಲ್ಲಿ ಕಲ್ಲುಗಳನ್ನು ತುಂಬಿ ಸೇತುವೆ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ನಿಲ್ಲುವಂತೆ ಮಾಡಿರುವುದು ಬೇಸರದ ಸಂಗತಿ ಒಂದು ದಿನ ಕಾಮಗಾರಿ ನಿಂತರೂ ನಷ್ಟವಾಗುತ್ತಿದೆ ಎಂದು ಗುತ್ತಿಗೆದಾರರೂ ಬೇಜಾರು ಮಾಡಿಕೊಳ್ಳುತ್ತಿದ್ದಾರೆ, ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಆ ದಿಶೆಯಲ್ಲಿ ಗಮನ ನೀಡಬೇಕು ಎಂದರು.
ಮಳೆಗಾಲ ಆರಂಭವಾಗುವ ಪೂರ್ವದಲ್ಲೇ ಕಾಮಗಾರಿ ಪೂರ್ಣಗೊಂಡು ಪರಿಪೂರ್ಣ ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು ಮಳೆಗಾಲ ಆರಂಭವಾದರೆ ನಾಲ್ಕೈದು ತಿಂಗಳುಗಳ ಕಾಲ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಇದರಿಂದಾಗಿ ಮಾಡಿದ ಕೆಲಸವೆಲ್ಲ ಪ್ರಯೋಜನಕ್ಕೆ ಬಾರದಂತಾಗುತ್ತದೆಎಂದ ಶಾಸಕರು ಕಾಮಗಾರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಯಮಗಳನ್ನು ಅನುಸರಿಸಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವಂತೆ ತಿಳಿಸಿದರು.
ಸೇತುವೆ ಕೂಡು ರಸ್ತೆಯ ಪಕ್ಕದಲ್ಲಿ ಇರುವ ಗುಡ್ಡ ಕತ್ತರಿಸುವ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಕಾಮಗಾರಿ ಮಾಡಬೇಕಿದ್ದು ಶಿರೂರಿನಲ್ಲಿ ನಡೆದಂತ ದುರಂತಗಳಿಗೆ ಅವಕಾಶ ಮಾಡಿಕೊಡದಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ಧಾರ ನಿಶ್ಚಲ ನರೋನ್ನಾ, ಉಪ ತಹಶೀಲ್ಧಾರ ಗಿರೀಶ್ ಜಾಂಬವಳಿಕರ್, ಡಿ.ವೈ.ಎಸ್.ಪಿ ಗಿರೀಶ್, ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು.
ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.