ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಹಲಕರ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ೧೨ನೇ ಶತಮಾನದ ಸಮಾನತೆಯ ಹರಿಕಾರ, ಅನುಭವ ಮಂಟಪ’ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ದಲಿತ ಚಳವಳಿ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ದಲಿತ ಚಳವಳಿ ಸಂಚಾಲಕ ರವಿ ಮದನಕರ್
ಹಾಗೂ ಜಿಲ್ಲಾ ಸಂಚಾಲಕ ಶಿವು ಅಷ್ಟಗಿ ತಿಳಿಸಿದ್ದಾರೆ.
ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ, ಮಹಾನ್ ಮಾನವತಾವಾದಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿ ವಿಕೃತಿ ಮೆರೆದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ವ ಜಾತಿ ಜನಾಂಗ ಮತ್ತು ಮಹಿಳೆಯರ ಸಮಾನತೆಗಾಗಿ ಹೋರಾಡಿದ ಮಹಾತ್ಮರಿಗೆ, ರಾಷ್ಟ್ರ ನಾಯಕರಿಗೆ ಆಗುವ ಅಪಮಾನ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇಂತಹ ಹೀನ ಕೃತ್ಯವೆಸಗುವ ಸಮಾಜ ಘಾತುಕರ ವಿರುದ್ಧ ಸರ್ಕಾರ ಕಠಿಣವಾದ ವಿಶೇಷ ಕಾನೂನು ತಂದು ಇಂತವರನ್ನು ಮಟ್ಟ ಹಾಕಬೇಕು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.