ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಇಂಡಿಯಾ’ ಮೈತ್ರಿಕೂಟದ ನಾಯಕರು ಉದ್ದೇಶಪೂರ್ವಕವಾಗಿಯೇ ಪದೇ ಪದೇ ಹಿಂದು ನಂಬಿಕೆಯನ್ನು ಅವಮಾನಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನ ಸೇಲಂನಲ್ಲಿ ಲೋಕಸಭೆ ಚುನಾವಣೆಗಾಗಿ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿದ ಅವರು, ರಾಹುಲ್ ಗಾಂಧಿ ಅವರ ‘ಶಕ್ತಿ’ ಹೇಳಿಕೆಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಹಾಗೂ ಡಿಎಂಕೆ ಯೋಜಿತವಾಗಿ ಹಿಂದು ಧರ್ಮವನ್ನು ಅವಮಾನಿಸುತ್ತಾರೆ.ಬೇರೆ ಯಾವುದೇ ಧರ್ಮವನ್ನು ಗುರಿಪಡಿಸಿಲ್ಲ ಎಂದು ಹೇಳಿದ್ದಾರೆ.
ಹಿಂದು ಧರ್ಮದಲ್ಲಿ ಮಹಿಳಾ ಶಕ್ತಿಯನ್ನು ಉಲ್ಲೇಖಿಸಿ ಶಕ್ತಿ ಎಂದರೆ ‘ಮಾತೃ ಶಕ್ತಿ’, ‘ನಾರಿ ಶಕ್ತಿ’. ಆದರೆ ಕಾಂಗ್ರೆಸ್ ಹಾಗೂ ಡಿಎಂಕೆ ಸೇರಿದ ಇಂಡಿಯಾ ಮೈತ್ರಿಕೂಟವು ಶಕ್ತಿಯನ್ನು ನಾಶಪಡಿಸಲು ಬಯಸುತ್ತದೆ ಎಂದು ಹೇಳಿದರು.
‘ಶಕ್ತಿ’ ದೈವಿಕ ಸಂಕೇತ. ಮಾರಿಯಮ್ಮನ್, ಮಧುರೈ ಮೀನಾಕ್ಷಿಯಮ್ಮನ್ ಮತ್ತು ಕಂಚಿ ಕಾಮಾಕ್ಷಿಯಂತಹ ವಿವಿಧ ದೇವತೆಗಳ ರೂಪದಲ್ಲಿ ಆರಾಧಿಸಲಾಗುತ್ತಿದೆ . ಶಕ್ತಿಯನ್ನು ನಾಶಪಡಿಸುವವರಿಗೆ ತಮಿಳುನಾಡಿನ ಜನತೆ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ತಿರುಗೇಟು ನೀಡಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಅಸುರ ಶಕ್ತಿಗೆ ಹೋಲಿಸಿತ್ತು. ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಒಂದು ‘ಶಕ್ತಿ’ಯ ಪರ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದರು.