ಹೊಸದಿಗಂತ ವರದಿ ಕಲಬುರಗಿ:
ಜಮ್ಮು ಕಾಶ್ಮೀರದ ಪೆಹಲ್ಗಾಂ,ನಲ್ಲಿ ಉಗ್ರರಿಂದ ನಡೆದ ದಾಳಿಯಲ್ಲಿ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿನ್ನೆ ನಡೆದಿರುವ ಭೀಕರ ಉಗ್ರರ ಗುಂಡಿನ ದಾಳಿಯಲ್ಲಿ ೨೬ಕ್ಕೂ ಅಧಿಕರು ಸಾವನ್ನಪ್ಪಿದ್ದು, ಕೇಂದ್ರ ಸರ್ಕಾರದ ವೈಫಲ್ಯದಿಂದಲೇ ಘಟನೆ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಎರಡು ಮೂರು ವರ್ಷಗಳಿಂದ ಸೇನಾ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಅಗ್ನಿ ವೀರ ಹೆಸರಿನಲ್ಲಿ ಕೇವಲ ಕೆಲವು ವರ್ಷಗಳ ಕಾಲಕ್ಕೆ ಸೀಮಿತವಂತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ದಿನಂಪ್ರತಿ ದೇಶದಲ್ಲಿ ನಮ್ಮ ಜನಸಂಖ್ಯೆಯ ದ್ವಿಗುಣಗೊಳ್ಳುತ್ತಿದೆ. ಅದಕ್ಕೆ ಅನುಗುಣವಾಗಿ ಸೇನಾ ನೇಮಕಾತಿ ನಡೆಯುತ್ತಿಲ್ಲ.ಸೇನಾ ನೇಮಕಾತಿ ಮಾಡಿ, ಸೂಕ್ತ ಬಂದೋಬಸ್ತ್ ಕೈಗೊಂಡಿದ್ದೆಯಾದಲ್ಲಿ ಈ ರೀತಿಯ ಕೃತ್ಯ ಸಂಭವಿಸುತ್ತಿರಲಿಲ್ಲ ಎಂದು ಹೇಳಿದರು.
ನಿನ್ನೆಯ ಜಮ್ಮು ಕಾಶ್ಮೀರದ ಪೆಹಲ್ಗಾಂ ನಲ್ಲಿ ನಡೆದಿರುವ ಭೀಕರವಾದ ದುರ್ಘಟನೆಗೆ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದ್ದು, ಉಗ್ರರನ್ನು ಹಾಗೂ ಅವರ ಮೂಲವನ್ನು ಗುರುತಿಸಿ ಅವರನ್ನು ಸಧೆಬಡೆಯುವ ಎಲ್ಲಾ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎಂದ ಅವರು, ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಪ್ರಧಾನಿ ಹುದ್ದೆಯಲ್ಲಿ ಇದ್ದಾಗ ಶತ್ರು ರಾಷ್ಟ್ರ ಇಬ್ಬಾಗ ಆಗುವಂತೆ ಮಾಡಿದ್ದಾರೆ.ಅದಕ್ಕಾಗಿಯೇ ಭಾರತ ಅವರನ್ನು ಉಕ್ಕಿನ ಮಹಿಳೆ ಎಂದು ಕರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಇಂದಿರಾಗಾಂಧಿ ಅವರಂತೆ ಉಗ್ರ ಚಟುವಟಿಕೆಗಳ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು