ಹೊಸದಿಗಂತ ವರದಿ, ಮಂಗಳೂರು:
ಆಂತಕರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಬೀಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜಕಾರಣದಲ್ಲಿ ವ್ಯವಹಾರ ನೋಡುವುದಿಲ್ಲ, ಅದರ ಲಾಭ, ನಷ್ಟವನ್ನೂ ಗಮನಿಸುವುದಿಲ್ಲ. ಯಾರದೋ ವೈಫಲ್ಯವನ್ನು ಎನ್ಕ್ಯಾಶ್ ಮಾಡುವ ಚಿಂತನೆ ನಮ್ಮದಲ್ಲ ಎಂದವರು ಹೇಳಿದರು.
ರಾಜ್ಯ ಸರ್ಕಾರ ಕಳೆದ ಎರಡು ವರ್ಷದಲ್ಲಿ ಅರಾಜಕತೆ ಸೃಷ್ಟಿಸಿದೆ. ಮುಸ್ಲಿಂ ತುಷ್ಟೀಕರಣ, ಭ್ರಷ್ಟಾಚಾರದಲ್ಲಿ ಮುಳುಗಿ ಎಲ್ಲೆ ಮೀರಿದೆ. ಈ ವಿಚಾರವನ್ನು ಮುಂದಿಟ್ಟು ರಾಜ್ಯ ಬಿಜೆಪಿ ಮುಖಂಡರು, ನಾಯಕರು ಜನರ ಮುಂದೆ ಹೋಗಿದ್ದಾರೆ. ರಾಜ್ಯದ ಪ್ರಸ್ತುತ ಸ್ಥಿತಿಯನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಎಂದರು.
ಪ್ರಸಕ್ತ ರಾಜ್ಯದಲ್ಲಿ ಒಂದರ್ಥದಲ್ಲಿ ತುರ್ತುಪರಿಸ್ಥಿತಿ ಇದೆ. ಕೇವಲ ಸರ್ವಾಕಾರ ಮಾತ್ರ ಇದೆ. ಮುಂಬರುವ ಚುನಾವಣೆಗಳಲ್ಲಿ ಜನತೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ, ಅರಾಜಕತೆ, ಲಂಚಾವತಾರ ಕೇವಲ ಒಂದೆರಡು ಶಾಸಕರು ಮಾತ್ರ ಅಲ್ಲ ಎಲ್ಲ ಶಾಸಕರು ಹೇಳುತ್ತಿದ್ದಾರೆ. ಸರ್ಕಾರದ ವಸ್ತುಸ್ಥಿತಿಯನ್ನು ಅವರೇ ಬಟಾಬಯಲು ಗೊಳಿಸುತ್ತಿದ್ದಾರೆ ಎಂದು ರಾಧಾ ಮೋಹನ್ದಾಸ್ ಹೇಳಿದರು.