ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಶಾಲಾ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಆರ್ಸಿಬಿಯು ಬೌಲಿಂಗ್ ನಲ್ಲೂ ಕಮಾಲ್ ಮಾಡಿ ರೋಚಕ ಜಯ ಸಾಧಿಸಿದ್ದು, ಈ ಮೂಲಕ ಪ್ಲೇ ಆಫ್ ಗೆ ಎಂಟ್ರಿ ನೀಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ, ಕೊಹ್ಲಿ (58), ವೆಂಕಟೇಶ್ ಅಯ್ಯರ್ (73) ಹಾಗೂ ದೇವದತ್ ಪಡಿಕ್ಕಲ್ (45) ಭರ್ಜರಿ ಬ್ಯಾಟಿಂಗ್ ನಡೆಸಿ 223 ರನ್ ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್ಗಳಿಸಿ ಸೋಲು ಅನುಭವಿಸಿತು.
ಪಂಜಾಬ್ ಗೆ ಕೈಕೊಟ್ಟ ಟಾಪ್ ಬ್ಯಾಟ್ಸ್ ಮ್ಯಾನ್ ಗಳು
ಪಂಜಾಬ್ ಪರ ಮೊದಲ ಓವರ್ನಲ್ಲೇ ಪ್ರಿಯಾಂಶ್ ಆರ್ಯ ಖಾತೆ ತೆರೆಯದೇ ಔಟ್ ಆದರು. ನಂತರ ಬಂದ ಪ್ರಭಸಿಮ್ರನ್ ಸಿಂಗ್ 2 ರನ್ಗಳಿಸಿ ಪೆವಿಲಿಯನ್ ನತ್ತ ಮುಖಮಾಡಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ 1 ರನ್ಗಳಿಸಿ ನಿರಾಸೆ ಮೂಡಿಸಿದರು.
ಶಶಾಂಕ್ ಹೋರಾಟಕ್ಕೆ ಸಿಗದ ಸಾಥ್
ಒಂದೆಡೆ ವಿಕೆಟ್ ಉರುಳುತಿದ್ದರೆ, ಅತ್ತ ಕೊನೊಲಿ ಹಾಗೂ ಸೂರ್ಯಂಶ್ ಶೆಡ್ಗೆ ತಂಡಕ್ಕೆ ಅಸೆರೆಯಾದರು. ಕೂಪರ್ ಕೊನೊಲಿ 37 ರನ್ಗಳ ಕಾಣಿಕೆ ನೀಡಿದರು. ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಜ್ 35 ರನ್ ಗಳಿಸಿ ಔಟಾದರು. ನಂತರ ಬಂದ ಮಾರ್ಕಸ್ ಸ್ಟೊಯಿನಿಸ್ 37 ರನ್ಗೆ ವಿಕೆಟ್ ಒಪ್ಪಿಸಿದರೆ, ಏಕಾಂಗಿ ಹೋರಾಟ ನಡೆಸಿದ ಶಶಾಂಕ್ ಸಿಂಗ್ 55 ರನ್ ಗಳಿಸಿದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲವಾದರು. ಇದರಿಂದ ಪಂಜಾಬ್ 23 ರನ್ಗಳಿಂದ ಸೋಲನುಭವಿಸಿತು.



