ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋದ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎನ್ನುವ ಕಾರಣಕ್ಕೆ ೩೧ ವರ್ಷಗಳ ನಂತರ ಕಾರ್ಯಕರ್ತರ ಮೇಲೆ ಕೇಸು ಹಾಕುವವರು ರಾಮನ ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರಲ್ಲಿ ರಾಮನ ಗುಣ ಬಂದಿದೆ ಎಂದು ಭಾವಿಸಲು ಸಾಧ್ಯವೇ ಎಂದು ಮಾಜಿ ಶಾಸಕ ಸಿ.ಟಿ.ರವಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಹೆಸರಲ್ಲೇ ರಾಮನಿದ್ದಾನೆ ಎಂಬ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ಪ್ರಭು ಶ್ರೀರಾಮ ಚಂದ್ರ ಯಾರಿಗೂ ಅನ್ಯಾಯ ಮಾಡಲಿಲ್ಲ. ಎಲ್ಲರಿಗೂ ನ್ಯಾಯಕೊಟ್ಟ, ಎಲ್ಲರ ಮೇಲೂ ವಿಶ್ವಾಸ ಇಟ್ಟಿದ್ದ, ಎಲ್ಲರಿಗೂ ಪ್ರೀತಿ ತೋರಿಸಿದ್ದ. ಧರ್ಮಕ್ಕಾಗಿ ಹೋರಾಟ ಮಾಡಿದ್ದ. ಆದರೆ ನಿಮ್ಮ ಸಿದ್ದರಾಮಯ್ಯ ಅವರು ದಲಿತರಿಗಾಗಿ ಮೀಸಲಿಟ್ಟ ೧೧ ಸಾವಿರ ಕೋಟಿ ರೂ. ಅನುದಾನವನ್ನು ವಾಪಾಸ್ ತೆಗೆದುಕೊಂಡರು. ಓಟ್ ಬ್ಯಾಂಕ್ ರಾಜನೀತಿಗಾಗಿ ಅಲ್ಪ ಸಂಖ್ಯಾತರಿಗೆ ೧೦ ಸಾವಿರ ಕೋಟಿ ಕೊಡಲು ಹೊರಟರು. ಒಬ್ಬರಿಗೆ ನ್ಯಾಯ, ಇನ್ನೊಬ್ಬರಿಗೆ ಅನ್ಯಾಯ ಮಾಡುವವರು ಶ್ರೀರಾಮನಿಗೆ ಸಮನಾಗಲು ಸಾದ್ಯವೆ ಎಂದರು.
ನಿಮ್ಮ ಹೆಸರಲ್ಲಿ ಆಂಜನೇಯ ಎಂಬ ಹೆಸರಿದೆ. ಆದರೆ ನಿಮ್ಮಲ್ಲಿ ಆಂಜನೇಯನ ಗುಣ ಇದೆಯಾ? ಹಾಗೆ ಸಿದ್ದರಾಮಯ್ಯನವರ ಹೆಸರಲ್ಲಿ ರಾಮನ ಹೆಸರಿದೆ ಅವರಲ್ಲಿ ರಾಮನ ಗುಣವಿದೆಯಾ ಎಂದು ಪ್ರಶ್ನಿಸಿದರು.