ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಭೀಕರ ಯುದ್ಧದಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ, ಮೃತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಲೇ ಇದೆ. ಇದೀಗ ಸಾವಿನ ಸಂಖ್ಯೆ 3,500 ದಾಟಿದೆ.
ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ನೆತನ್ಯಾಹು ಪಡೆ ಗಾಜಾದಲ್ಲಿ ಬಾಂಬ್ ಮಳೆ ಸುರಿಸಿದೆ. ದಾಳಿ-ಪ್ರತಿದಾಳಿಯಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ನ ಎರಡೂ ಕಡೆ 3,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ರಣಭೀಕರ ಯುದ್ಧದಲ್ಲಿ ಹಮಾಸ್ ಉಗ್ರರು ಮಕ್ಕಳು, ಮಹಿಳೆಯರು, ಗರ್ಭಿಣಿ ಎಂದೂ ನೋಡದೆ ತಲೆ ಕಡಿದು ಮಾರಣಹೋಮ ನಡೆಸುತ್ತಿದ್ದಾರೆ. ಇದಕ್ಕೆ ಅಕ್ಕಪಕ್ಕದ ದೇಶಗಳು ಸಾಥ್ ನೀಡಿವೆ.
ಇಸ್ರೇಲ್ ಬಲಿಷ್ಠ ರಕ್ಷಣಾ ಸಾಮರ್ಥ್ಯ ಹೊಂದಿದ ದೇಶವಾದ್ರೂ ಸುತ್ತಮುತ್ತಲೂ ಶತ್ರುಗಳನ್ನು ಹೊಂದಿದೆ. ಬಹುತೇಕ ಮುಸ್ಲಿಂ ಪ್ರಾಬಲ್ಯವಿರುವ ದೇಶಗಳೇ ಇಸ್ರೇಲ್ನ್ನು ಸುತ್ತುವರಿದಿದ್ದು, ಯಹೂದಿಗಳ ನಾಡಿಗೆ ಆತಂಕ ತಪ್ಪಿಲ್ಲ.
ಯುದ್ಧದ ಸಂದರ್ಭದ ಲಾಭ ಪಡೆದ ಅಕ್ಕಪಕ್ಕದ ದೇಶಗಳು ತಾವೂ ದಾಳಿಗೆ ಮುಂದಾಗಿವೆ. ಉತ್ತರ ಭಾಗದಲ್ಲಿರುವ ಲಿಬಿಯಾನ್ ಹೆಚ್ಚಿನ ಪಕ್ಷದ ದಾಳಿ ನಡೆಸಿದ್ದು, ಇಸ್ರೇಲ್ ರಕ್ಷಣಾ ಪಡೆಗಳನ್ನು ಗುರಿಯಾಗಿಸಿ 15 ರಾಕೆಟ್ ಹಾರಿಸಿದೆ. ಸಿರಿಯಾ, ಇರಾನ್ ಬೆಂಬಲಿತ ಹಿಜ್ಬುಲ್ಲಾಗಳು ಪರಿಸ್ಥಿತಿಯ ಲಾಭ ಪಡೆದು ದಾಳಿ ಮಾಡುತ್ತಿವೆ.
ಇಸ್ರೇಲ್ನಲ್ಲಿ ಸಾಕಷ್ಟು ಭಾರತೀಯರು ಸಿಲುಕಿದ್ದು, ಭಾರತೀಯರನ್ನು ಸುರಕ್ಷಿತವಾಗಿ ವಾಪಾಸ್ ಕರೆತರಲು ಭಾರತ ಸರ್ಕಾರ ಆಪರೇಷನ್ ಅಜಯ್ ಆರಂಭಿಸಿದೆ. ವಿಶೇಷ ಚಾರ್ಟರ್ ವಿಮಾನವನ್ನೂ ನೀಡಿದೆ.