ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಂಡಂತಹ ಅತ್ಯಂತ ಧೀಮಂತ, ಹಿರಿಯ ರಾಜಕಾರಣಿ, ಸ್ವಾತಂತ್ರ್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ ಅನೇಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖ ಹಾಗೂ ದಿಗ್ಭ್ರಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ ದೇಶ ಒಬ್ಬ ಹಿರಿಯರು, ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಾಗಿದೆ. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಶುದ್ಧವಾದ ಬದುಕು ನಡೆಸಿ, ಆದರ್ಶಮಯ ಜೀವನ ನಡೆಸಿ, ಇಡೀ ಭಾರತಕ್ಕೆ ಪ್ರಿಯರಾಗಿರುವಂತಹವರು. ಕೃಷ್ಣ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ನಂತರ ತಮ್ಮ ಸಮಾಜವಾದಿ ಮನೋಭಾವನೆ ಬಿಟ್ಟುಕೊಡದೇ ಪಥಮ ಬಾರಿಗೆ ಸ್ವತಂತವಾಗಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಸೇವೆ ಮಾಡಿದ್ದಾರೆ. ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ದೇಶದ ಸೇವೆ ಹಾಗೂ ರಾಜ್ಯದ ಸೇವೆ ಮಾಡಿದ್ದಾರೆ ಎಂದಿದ್ದಾರೆ.