ಇಂಥ ಸುರಕ್ಷಿತ ಭಾರತದಲ್ಲಿ ನಾವಿರುವುದೇ ಪುಣ್ಯ: ಇಸ್ರೇಲ್​ನ ಕಹಿ ಘಟನೆ ಬಿಚ್ಚಿಟ್ಟ ನಟಿ ನುಶ್ರತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ಗುಂಪು ದಾಳಿಗೆ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಯುದ್ಧ ಇನ್ನೂ ಭೀಕರವಾಗುತ್ತಲೇ ಸಾಗಿದೆ.

ಮತ್ತೊಂದೆಡೆ, ಇಸ್ರೇಲ್‌ನಲ್ಲಿ ಹದಗೆಟ್ಟ ಪರಿಸ್ಥಿತಿಯ ನಡುವೆ, ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದೆ. ಜಾಗರೂಕರಾಗಿ ಮತ್ತು ಸುರಕ್ಷಿತವಾಗಿರಲು ಅವರನ್ನು ಕೇಳಲಾಗಿದೆ.

ಇದರ ನಡುವೆಯೇ, ಹಮಾಸ್​ನಿಂದ ದಾಳಿಗೊಳಗಾಗಿರುವ ಇಸ್ರೇಲ್​ನಲ್ಲಿ ಬಾಲಿವುಡ್ ನಟಿ ನುಶ್ರತ್ ಭರೂಚಾ ಸಿಕ್ಕಿಹಾಕಿಕೊಂಡಿದ್ದರು. ನುಶ್ರತ್ ಭರೂಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್​​ಗೆ ಹೋಗಿದ್ದರು. ಆದರೆ ಅದೇ ವೇಳೆ ಹಮಾಸ್ ಉಗ್ರರಿಂದ ಏಕಾಏಕಿ ದಾಳಿ ನಡೆದಿದೆ. ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಭಾರತದ ಶ್ರಮದ ಫಲವಾಗಿ ನಟಿಗೆ ಏನೂ ಅನಾಹುತ ಸಂಭವಿಸಿಲ್ಲ. ನಟಿ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದಾರೆ.

ಇದೀಗ ನಟಿ ಮಾಧ್ಯಮಗಳ ಎದುರು ಬಂದು ಸಾವಿನ ಬಾಯಿಗೆ ತಾವು ಹೋಗಿದ್ದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಅಂದು ತಾವು ಉಳಿದುಕೊಂಡಿದ್ದ ಹೋಟೆಲ್ ಸಮೀಪ ಗುಂಡಿನ ದಾಳಿಯಾಗಿತ್ತು, ಏನು ಆಗುತ್ತದೆಯೋ ತಿಳಿದುಬರಲಿಲ್ಲ. ಆ ಕ್ಷಣದಲ್ಲಿ ಸಾವೇ ಹತ್ತಿರ ಬಂದ ಹಾಗಿತ್ತು ಎಂದಿದ್ದಾರೆ .

ಕೊನೆಗೂ ಸುರಕ್ಷಿತವಾಗಿ ಮನೆಗೆ ತಲುಪಿದ್ದೇನೆ ಎಂದಿರುವ ನಟಿ, ಇಂಥ ಸುರಕ್ಷಿತ ಭಾರತದಲ್ಲಿ ನಾವಿರುವುದೇ ಪುಣ್ಯ ಎಂದಿದ್ದಾರೆ. ಇಲ್ಲಿ ನಾವು ಸಾಕಷ್ಟು ಸುರಕ್ಷಿತವಾಗಿದ್ದೇವೆ. ಇಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದಿರುವ ನಟಿ, ಭಾರತ ಸರ್ಕಾರ ಹಾಗೂ ಇಸ್ರೇಲ್​ನಲ್ಲಿರುವ ಭಾರತ ರಾಯಭಾರ ಕಚೇರಿಯು ಹೇಗೆ ಜನರ ರಕ್ಷಣೆ ಮಾಡುವಲ್ಲಿ ಕಾರ್ಯೋನ್ಮುಖವಾಗುತ್ತದೆ ಎಂದು ಬಣ್ಣಿಸಿದ್ದಾರೆ.

ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗೂ ಪ್ರಾರ್ಥಿಸಿದ್ದಾರೆ. ನಟಿ ಸುರಕ್ಷವಾಗಿ ವಾಪಸಾಗಿರುವುದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here