ಹೊಸದಿಗಂತ ವರದಿ, ಅಂಕೋಲಾ:
ಮೀನುಗಾರರ ಆರಾಧ್ಯ ದೇವರಾಗಿ ಬೆಲೇಕೇರಿ ಮತ್ತು ಹಾರವಾಡದ ಸಮುದ್ರದ ನಡುವೆ ಇರುವ ಕುಕ್ಕುಡ ನಡುಗಡ್ಡೆಯಲ್ಲಿ ನೆಲೆ ನಿಂತಿರುವ ಶ್ರೀ ಕುಕ್ಕುಡೇಶ್ವರ ಮತ್ತು ನೇತ್ರಾಣಿ ದೇವಿಯ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು.
ಬೆಲೇಕೇರಿ ಕಡಲ ತೀರದಿಂದ ಕೆಲವೇ ಸಂಖ್ಯೆಯಲ್ಲಿ ಪರ್ಶಿಯನ್ ಬೋಟುಗಳಲ್ಲಿ ತೆರಳಿದ ಮೀನುಗಾರು ದೇವರ ದರ್ಶನ ಪಡೆದು ವಾರ್ಷಿಕ ಹರಕೆಗಳನ್ನು ತೀರಿಸಿದರು.
ಕೋವಿಡ್ ನಿಯಮಾವಳಿಗಳ ಕಾರಣ ತಾಲೂಕು ಆಡಳಿತ ಕೇವಲ 6 ಬೋಟುಗಳಿಗೆ ಮಾತ್ರ ನಡುಗಡ್ಡೆಗೆ ತೆರಳಲು ಅನುಮತಿ ನೀಡಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆಗೆ ತೆರಳಲು ಅವಕಾಶ ಇರಲಿಲ್ಲ.
ಬೋಟ್ ಮೂಲಕ ತೆರಳುವವರಿಗೆ ಸುರಕ್ಷತಾ ಕ್ರಮವಾಗಿ ಲೈಫ್ ಜಾಕೇಟ್ ವ್ಯವಸ್ಥೆ ಮಾಡಲಾಗಿತ್ತು.
ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ,ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಪಿ ವೈ ಸಾವಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೂಕ್ತ ಭದ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು.
ಆರೋಗ್ಯ ಇಲಾಖೆ ವತಿಯಿಂದ ಬೆಲೆಕೇರಿ ಬಂದರು ಪ್ರದೇಶದಲ್ಲಿ ನಡುಗಡ್ಡೆಗೆ ತೆರಳುವವರು ಕೋವಿಡ್ ಲಸಿಕೆ ಪಡೆದಿರುವ ಕುರಿತು ಪರಿಶೀಲಿಸಿ,ದೇಹದ ಉಷ್ಣಾಂಶ ಪರೀಕ್ಷೆ ನಡೆಸಲಾಯಿತು.
ಮೀನುಗಾರರ ಮುಖಂಡ ಗಣಪತಿ ಬಾನಾವಳಿಕರ, ಪ್ರಮೋದ ಬಾನಾವಳಿಕರ, ಕೃಷ್ಣಾ ಬಾನಾವಳಿಕರ ಮೊದಲಾದವರು ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೋಟ್ ಯೂನಿಯನ್ ವತಿಯಿಂದ ಪ್ರಸಾದ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು.