ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರಾಗೃಹಕ್ಕೆ ಸಾಗಿಸುತ್ತಿದ್ದಾಗ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಗೆ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2019 ರ ಜುಲೈ 4 ರಂದು ಗದಗ ಬೆಟಗೇಲಿ ನಿವಾಸಿ ರಾಜು ರವಿ ಕಲ್ಲವಡ್ಡರ್ ಎಂಬಾತನಿಗೆ ಗದಗ ಪೊಲೀಸರು ಸಾರಿಗೆ ಸಂಸ್ಥೆಯ ಬಸ್ ಮೂಲಕ ಮಂಗಳೂರು ಕಾರಾಗೃಹಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಶೌಚಾಲಯದ ಒಳಗೆ ಹೋಗಿದ್ದ ಆರೋಪಿತ ಶೌಚಾಲಯದ ಕಿಟಕಿ ಹಾರಿ ಪರಾರಿಯಾಗಿದ್ದ.
ಈ ಕುರಿತು ಗದಗ ಪೊಲೀಸರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಂತರ ಆರೋಪಿತನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದು ಅಂದಿನ ಸಹಾಯಕ ಪೊಲೀಸ್ ಉಪನಿರೀಕ್ಷಕಿ ಲಲಿತಾ ರಜಪೂತ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಧೀಶ ಪ್ರಶಾಂತ ಬಾದವಡಗಿ ಅವರು ಆರೋಪಿತನಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ ಎಸ್ ಪಟಗಾರ ವಾದಿಸಿದ್ದರು.