ಹೊಸದಿಗಂತ ಡಿಜಿಟಲ್ ಡೆಸ್ಕ್: ( ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಇವರ ಹೆಸರು ಜತೀಂದ್ರನಾಥ್ ದಾಸ್, ಪ್ರಸಿದ್ಧರಾಗಿದ್ದು ಜತಿನ್ ದಾಸ್ ಎಂಬ ಹೆಸರಿನಲ್ಲಿ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಚಿರಕಾಲ ಉಳಿವ ಕ್ರಾಂತಿಕಾರಿಗಳ ಹೆರುಗಳಲ್ಲಿ ಜತಿನ್ ದಾಸ್ ಹೆಸರು ಕೂಡ ಒಂದು. ಈ ಕ್ರಾಂತಿಕಾರಿ ಜೈಲಿನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹವನ್ನು ನೋಡಿ ಕ್ರೂರಿ ಬ್ರಿಟೀಷರೇ ಬೆಚ್ಚಿಬಿದ್ದಿದ್ದರು.
1904ರ ಅಕ್ಟೋಬರ್ 27ರಂದು ಕಲ್ಕತ್ತಾದಲ್ಲಿ ಜನಿಸಿದ ಇವರು ತಮ್ಮ ಮೆಟ್ರಿಕ್ಯುಲೇಷನ್ ಮತ್ತು ಮಧ್ಯಂತರ ಪರೀಕ್ಷೆಗಳನ್ನು ಮುಗಿಸಿ ʼಅನುಶೀಲನ್ ಸಮಿತಿʼ ಸೇರಿದರು. ಮತ್ತು ಹರೆಯದಲ್ಲಿದ್ದಾಗಲೇ 1921ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. 1925ರ ನವೆಂಬರ್ ನಲ್ಲಿ ಅವರ ರಾಜಕೀಯ ಚಟುವಟಿಕೆಗಳ ವಿರುದ್ಧವಾಗಿ ಅವರನ್ನು ಬಂಧಿಸಿ ಮೈಮೆನ್ಸಿಂಗ್ ಜೈಲಿನಲ್ಲಿ ಇರಿಸಲಾಯಿತು. ಆದರೆ ಜೈಲಿನಲ್ಲಿ ರಾಜಕೀಯ ಖೈದಿಗಳ ಮೇಲೂ ದೌರ್ಜನ್ಯವಾಗುತ್ತಿರುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.
ಅಲ್ಲಿಂದ ಬಿಡುಗಡೆಯಾಗಿ ಕೆಲವೇ ವರ್ಷಗಳಲ್ಲಿ ಅಂದರೆ 14 ಜೂನ್ 1929 ರಂದು ಕ್ರಾಂತಿಕಾರಿ ಚಟುವಟಿಕೆಗಳ ಆರೋಪದ ಮೇಲೆ ಅವರನ್ನು ಮತ್ತೆ ಬಂಧಿಸಲಾಯಿತು. ಮತ್ತೆ ಉಪವಾಸ ಸತ್ಯಾಗ್ರಹ ಕೈಗೊಂಡರು. ಹೀಗೆ ಅರವತ್ಮೂರು ದಿನಗಳ ನಂತರ ಸಪ್ಟೆಂಬರ್ 13, 1929ರಂದು ತಾಯ ಭಾರತಿಯ ಮಣ್ಣಿನಲ್ಲಿ ಲೀನವಾಗಿ ಹುತಾತ್ಮರಾದರು.