ಹೊಸದಿಗಂತ ವರದಿ ಹುಬ್ಬಳ್ಳಿ:
ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷ ಆರಂಭಿಸುತ್ತಾರೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಬಿಜೆಪಿ ಸಹ ಅವರನ್ನು ಕೈಬಿಡುವುದಿಲ್ಲ. ಪಕ್ಷದಲ್ಲಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮಲು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖಂಡರಾದ ಜನಾರ್ಧನ ರೆಡ್ಡಿ ಸಾರ್ವಜನಿಕರ ಬದುಕಲ್ಲಿ ಬರಬೇಕು ಎಂದಷ್ಟೇ ಹೇಳಿದ್ದಾರೆ ಹೊರತು ಪಕ್ಷವನ್ನು ಮೀರಿ, ಪಕ್ಷಕ್ಕೆ ತೊಂದರೆ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಕುರಿತು ನಾನು ಸಹ ಪಕ್ಷದ ಹಿರಿಯರ ಜೊತೆ ಚರ್ಚೆಮಾಡಿದ್ದೇನೆ. ಮುಖ್ಯಮಂತ್ರಿ ಅವರು ಸಹ ಅವರೊಂದಿಗೆ ಮಾತನಾಡಿದ್ದಾರೆ ಎಂದರು.
ಜನಾರ್ಧನ ರೆಡ್ಡಿ ಅವರೊಂದಿಗೆ ಸ್ನೇಹ ಕಳೆದುಕೊಳ್ಳುವುದಿಲ್ಲ . ಪಕ್ಷ ರಾಜಕೀಯವಾಗಿ ಸ್ಥಾನ, ಮಾನ ನೀಡಿದೆ. ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಅವರೇ ಪರಿಹಾರ ಒದಗಿಸುತ್ತಾರೆ ಎಂದು ಹೇಳಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಸೂದೆ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ. ರಪಾಂಟ ಮಾಡುವುದು ಬೇಡ. ಎಲ್ಲರೂ ಒಮ್ಮತದಿಂದ ಮಸೂದೆ ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ ಸಣ್ಣಪುಟ್ಟ ವಿಚಾರಕ್ಕೆ ವಿರೋಧ ಪಕ್ಷದವರು ಸದನವನ್ನೇ ನಡೆಯದಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.