ಹೊಸದಿಗಂತ , ರಾಮನಗರ :
ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಗಳ ಅಪವಿತ್ರ ಮೈತ್ರಿಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಮೈತ್ರಿ ನಂತರ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪುಟ್ಟಣ್ಣ ಅವರ ಗೆಲುವಿನ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಂಗೇರಿ ಸೂಲಿಕೆರೆ ಬಳಿ ಭಾನುವಾರ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಆಯ್ಕೆಯಾದ ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣ ಅವರು ಚುನಾವಣೆಯಲ್ಲಿ ಜಯಗಳಿಸಲು ಶ್ರಮಿಸಿದವರಿಗೆ ಕೃತಜ್ಞತಾ ಸಲ್ಲಿಕೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜ್ಞಾವಂತ ಶಿಕ್ಷಕರಾದ ನಿಮ್ಮಗಳ ಧ್ವನಿಯಾಗಿ ಕೆಲಸ ಮಾಡಿರುವ ಫಲವಾಗಿಯೆ ಅವರನ್ನು ಐದು ಬಾರಿ ಆಯ್ಕೆ ಮಾಡಿದ್ದೀರಿ, ಕುಮಾರಸ್ವಾಮಿ ಹೇಳಿದಂತೆ ರಾಜ್ಯದಲ್ಲಿ ಅಪವಿತ್ರ ಮೈತ್ರಿ ವಿರುದ್ದ ಜಯ ಸಾಧಿಸಿರುವುದರಿಂದ ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಪುಟ್ಟಣ್ಣ ಜೊತೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸರ್ಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ವಿಧಾನಸಭೆಯಲ್ಲಿ ನರೇಂದ್ರ ಮೋದಿ ರಾಜ್ಯದಲ್ಲಿ ರ್ಯಾಲಿ ಮಾಡಿದ್ದರು, ಆಗ ನಾವು 136 ಸ್ಥಾನ ಗೆಲುವು ಸಾಧಿಸಿದೆವು. ನಾಲ್ಕು ವರ್ಷ ಲೂಟಿ ಮಾಡಿವರಿಗೆ ಜನರು ಬುದ್ದಿ ಕಲಿಸಲಿದ್ದಾರೆ ಎಂದು ಮೈತ್ರಿ ವಿರುದ್ದ ಕಿಡಿಕಾರಿದರು.