August 1, 2026
Saturday, August 1, 2026
spot_img

ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಬಿಗ್ ಫೈಟ್: ನಿಖಿಲ್ ನೇತೃತ್ವದಲ್ಲಿ ಪಾದಯಾತ್ರೆಗೆ ಹೊಸ ಮುಹೂರ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ಬಿಡದಿ ಟೌನ್‌ಶಿಪ್ ಯೋಜನೆಯ ವಿರೋಧಿ ಪಾದಯಾತ್ರೆಗೆ ಇದೀಗ ನೂತನ ವೇಳಾಪಟ್ಟಿ ಸಿದ್ಧವಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಈ ಮಹತ್ವದ ಹೋರಾಟದ ನೂತನ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಮೈತ್ರಿ ಪಕ್ಷ ಬಿಜೆಪಿಯಿಲ್ಲದೆ ಒಂಟಿ ಸಮರ

ವಿಶೇಷವೆಂದರೆ, ಈ ಬಾರಿಯ ಪ್ರತಿಭಟನಾ ಮೆರವಣಿಗೆಯಲ್ಲಿ ಮೈತ್ರಿಕೂಟದ ಪಾಲುದಾರ ಪಕ್ಷವಾದ ಬಿಜೆಪಿಯನ್ನು ದೂರವಿಟ್ಟು, ಜೆಡಿಎಸ್ ಏಕಾಂಗಿಯಾಗಿ ಬೀದಿಗಿಳಿಯಲು ನಿರ್ಧರಿಸಿದೆ. ಈ ಬೃಹತ್ ಹೋರಾಟವು ಆಗಸ್ಟ್ 9, 10 ಹಾಗೂ 11ರಂದು ಒಟ್ಟು ಮೂರು ದಿನಗಳ ಕಾಲ ನಿರಂತರವಾಗಿ ಜರುಗಲಿದೆ.

ಭೈರಮಂಗಲದಿಂದ ರಾಜಧಾನಿ ಫ್ರೀಡಂ ಪಾರ್ಕ್‌ವರೆಗೆ

ಆಗಸ್ಟ್ 9ರಂದು ರಾಮನಗರ ತಾಲೂಕಿನ ಭೈರಮಂಗಲದಿಂದ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಆಗಸ್ಟ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅದೇ ದಿನ ರಾಜಧಾನಿಯಲ್ಲಿ ಜೆಡಿಎಸ್ ಬೃಹತ್ ಬಹಿರಂಗ ಸಮಾವೇಶವನ್ನು ಹಮ್ಮಿಕೊಂಡಿದೆ.

ದೇವೇಗೌಡರು ಹಾಗೂ ಕುಮಾರಸ್ವಾಮಿ ಭಾಗಿ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಒಂದು ದಿನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !